ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಕ್ಕೆ ಕಲ್ಲಿದ್ದಲಿನ ಕೊರತೆ ಆಗದಂತೆ ಎಲ್ಲಾ ರೀತಿಯ ಕ್ರಮಕೈಗೊಂಡಿದ್ದೇವೆ. ಕಳೆದ 7 ವರ್ಷಗಳ ಬಳಿಕ ಕರ್ನಾಟಕದಲ್ಲಿ 5020 ಮೆಗಾವ್ಯಾಟ್ ವಿದ್ಯುತನ್ನು ಮೊದಲನೇ ಬಾರಿಗೆ ಆರಂಭಿಸಿದ್ದೇವೆ. ರಾಯಚೂರು ಮತ್ತು ಬಳ್ಳಾರಿಯ ಎಲ್ಲಾ ಯುನಿಟ್ಗಳು ಕಾರ್ಯರಂಭವಾಗಿದೆ. ಕಲ್ಲಿದ್ದಲಿನ ನಿರಂತರವಾದ ಸರಬರಾಜು ಆಗುವ ಕಾರಣಕ್ಕಾಗಿ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ವಿದ್ಯುತ್ ಸರಬರಾಜು ಆಗುತ್ತಿದ್ದು, ತೊಂದರೆಯಾಗದಂತೆ ನಿರ್ವಹಣೆಯನ್ನು ಅಧಿಕಾರಿ ಗಳು ಚೆನ್ನಾಗಿ ಮಾಡಿದ್ದಾರೆ ರಾಜ್ಯ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರಂತರವಾಗಿ ಹಾಗೂ ಗುಣಮಟ್ಟದ ವಿದ್ಯುತ್ ನೀಡಬೇಕು ಮತ್ತು ಸರಬರಾಜಿನಲ್ಲಿಯು ಯಾವುದೇ ರೀತಿಯ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಉಪಕೇಂದ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳಿದರು.
899 ಹೊಸ ನೇಮಕಾತಿ
ಇಲಾಖೆಯಲ್ಲಿ ಹೊಸದಾಗಿ 899 ಮಂದಿ ಪವರ್ ಮೆನ್ಗಳ ಹೊಸ ನೇಮಕಾತಿ ಮಾಡಿದೆ. ಮೆಸ್ಕಾಂನಲ್ಲೇ 600ಕ್ಕೂ ಹೆಚ್ಚು ಪವರ್ ಮೆನ್, ಜೆ.ಇ. ಗಳ ನೇಮಕಾತಿ ಆರಂಭವಾಗಿದ್ದು, ಕೊರತೆಯಿರುವ ಕಡೆಗಳಲ್ಲಿ ತೆಗೆದುಕೊಳ್ಳುವ ಕೆಲಸ ಪ್ರಾರಂಭ ಮಾಡಿದ್ದೇವೆ. ಈ ನಡುವೆ ಹೊಸ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, 1500 ಜನರಿಗೆ ಕೆಪಿಟಿಸಿಎಲ್ ಮುಖಾಂತರ ನೇಮಕಾತಿಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಮುಂದಿನ ಜೂನ್ ತಿಂಗಳ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದರು. ಪವರ್ ಮ್ಯಾನ್ಗಳಿಗೆ ಈ ಹಿಂದೆ ಇದ್ದ 20 ಲಕ್ಷ ಜೀವವಿಮೆಯನ್ನು ತಾನು ಸಚಿವನಾದ ಬಳಿಕ ಅದನ್ನು 40 ಲಕ್ಷಕ್ಕೆ ಏರಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.