ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂಧೂರ, ಭಾರತ, ಪಾಕಿಸ್ತಾನದ ಕದನ ವಿರಾಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
ಈ ವೇಳೆ ಪಾಕಿಸ್ತಾನಕ್ಕೆ ನಿಮ್ಮ ನ್ಯೂಕ್ಲಿಯರ್ ಬ್ಲ್ಯಾಕ್ಮೆಲ್ಗೆ ನಾವು ಬೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್ ಸಂದೇಶ ನೀಡಿದ್ದಾರೆ.
ಭಾರತ ಯಾವುದೇ ರೀತಿಯ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ. ಭಾರತದ ಸರ್ಜಿಕಲ್ ದಾಳಿಗಳು ಪಾಕಿಸ್ತಾನದ ಯುದ್ಧ ಸಿದ್ಧತೆಗಳನ್ನು ಛಿದ್ರಗೊಳಿಸಿವೆ ಎಂದು ಹೇಳಿದರು.
ಭಾರತ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಪರಮಾಣು ಅಸ್ತ್ರ ಬಳಕೆ ಮಾಡುತ್ತೇವೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡುತ್ತಿತ್ತು. ಈಗ ಮೋದಿಯವರು ನಿಮ್ಮ ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ, ಬಗ್ಗಲ್ಲ. ನಾವು ಯಾವ ರೀತಿ ಪ್ರತಿಕ್ರಿಯೆ ನೀಡಬೇಕೋ ನಾವು ಅದೇ ರೀತಿಯ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳುವ ಮೂಲಕ ಭಾರತ ಎಲ್ಲದ್ದಕ್ಕೂ ಸಿದ್ಧವಿದೆ ಎಂಬ ಸಂದೇಶವನ್ನು ಕಳುಹಿಸಿದರು.