ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಉಚಿತ ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಜನರಿಗೆ ಲಾಭ ನೀಡುತ್ತಿರುವ ಹೊರತಾಗಿಯೂ, ಕೆಲವರು ಸರ್ಕಾರವನ್ನು ಟೀಕಿಸುತ್ತಿರುವುದು ಬೇಸರದ ಸಂಗತಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಅವರು ಈ ಬಗ್ಗೆ ಸ್ಪಷ್ಟವಾಗಿ ಮಾತನಾಡಿದರು. ನಾವು ಗ್ಯಾರಂಟಿ ಯೋಜನೆಗಳನ್ನು ನಮ್ಮ ಪಕ್ಷದವರಿಗಾಗಿ ಮಾಡಿಲ್ಲ. ಎಲ್ಲ ಸಮುದಾಯದ ಜನರಿಗೆ ಅನುಕೂಲವಾಗಲೆಂದು ರೂಪಿಸಿದ್ದೇವೆ. ಆದರೆ ಪ್ರಯೋಜನ ಪಡೆದುಕೊಂಡು ಮತ್ತೆ ಸರ್ಕಾರವನ್ನೇ ಟೀಕಿಸುವವರು ಹೆಚ್ಚಾಗಿದ್ದಾರೆ. ಕೆಲವೊಮ್ಮೆ ನಮ್ಮದೇ ಪಕ್ಷದವರು ನನ್ನ ಬಳಿ ಬಂದು ‘ರಾಜ್ಯ ಬರ್ಬಾದ್ ಆಗುತ್ತಿದೆ’ ಎಂದು ಹೇಳುತ್ತಾರೆ, ಎಂದು ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿತ್ತ ಸಮತೋಲನದ ಪ್ರಶ್ನೆಗೆ ಖರ್ಗೆ ಉತ್ತರ
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹಣಕಾಸು ಸ್ಥಿತಿಗೆ ಧಕ್ಕೆ ಆಗುತ್ತಿದೆ ಎಂಬ ಪ್ರತಿಪಕ್ಷದ ಆರೋಪವನ್ನು ಖಂಡಿಸಿದ ಖರ್ಗೆ, ಸರ್ಕಾರ ಬೊಕ್ಕಸ ಖಾಲಿಯಾಗಿಲ್ಲ. ಶಾಸಕರಿಗೆ 50 ಕೋಟಿ ರೂಪಾಯಿಗಳಷ್ಟು ಅನುದಾನ ನೀಡುತ್ತಿರುವ ಸರ್ಕಾರ ದಿವಾಳಿ ಹೇಗೆ?” ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಲಕ್ಷ್ಮೀ ಕಾಲುಕುಂಟಿಕೊಂಡು ಬಿದ್ದಿದ್ದಾಳೆ ಎಂಬುದಾಗಿ ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಮಾದರಿಯಾಗಿ ಜಾರಿಗೆ ತಂದಿದ್ದು, ದೇಶದ ಇತರ ರಾಜ್ಯಗಳಿಗಿಂತ ಇಲ್ಲಿ ಉತ್ತಮವಾಗಿ ನಡೆಯುತ್ತಿದೆ ಎಂದು ಖರ್ಗೆ ಅಭಿಪ್ರಾಯಪಟ್ಟರು. ಬಿಜೆಪಿಯೇ ಇತರ ರಾಜ್ಯಗಳಲ್ಲಿ ಗ್ಯಾರಂಟಿ ಘೋಷಣೆ ಮಾಡಿದೆ. ಆದರೆ ಅನುಷ್ಠಾನದಲ್ಲಿ ವಿಫಲವಾಗಿದೆ. ಇಂತಹ ಪರಿಣಾಮಕಾರಿಯಾದ ಯೋಜನೆಗಳನ್ನು ನಾನು ಯಾವುದೇ ರಾಜ್ಯದಲ್ಲಿ ಕಂಡಿಲ್ಲ, ಎಂದರು.