ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ರೀತಿಯ ಉಗ್ರ ಕೃತ್ಯವನ್ನು ಭಾರತವು ಯುದ್ಧವೆಂದೇ ಪರಿಗಣಿಸಲಿದೆ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದು, ಈ ಮೂಲಕ ನೆರೆ ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಅಬ್ದುಲ್ಲಾ, ನಾವು ಏನು ಮಾಡುತ್ತೇವೆ ಎಂಬುದು ಮುಖ್ಯವಲ್ಲ. ದ್ವೇಷ ಸಾಧನೆಯೇ ಪಾಕಿಸ್ತಾನದ ಉದ್ದೇಶವಾಗಿದ್ದರೆ, ಭಯೋತ್ಪಾದನೆ ಮುಕ್ತ ಜಮ್ಮು ಮತ್ತು ಕಾಶ್ಮೀರವನ್ನು ಕಾಣಲು ಸಾಧ್ಯವಾಗದು. ಪಹಲ್ಲಾಮ್ ದಾಳಿ ಅದನ್ನು ಜಾಹೀರು ಮಾಡಿದೆ ಎಂದು ನನಗನಿಸುತ್ತದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯು ಸಂವಿಧಾನದ 370ನೇ ವಿಧಿಯ ಫಲ ಎಂಬ ನಿರೂಪಣೆಯನ್ನು ಪ್ರಸಾರ ಮಾಡಲು ಬಿಜೆಪಿ ಭಾರಿ ಪ್ರಯತ್ನ ಮಾಡುತ್ತಿದೆ. ಅದು ಸತ್ಯವಲ್ಲ ಎಂಬುದು ನಮಗೆಲ್ಲ ಗೊತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಗೆ ಕಾರಣ ಪಾಕಿಸ್ತಾನದ ಉದ್ದೇಶಗಳು. ಹಾಗಾಗಿ, 370ನೇ ವಿಧಿ ಅಡಿ ನೀಡಿದ್ದ ವಿಶೇಷ ಸ್ಥಾನಮಾನಗಳನ್ನು ಹಿಂಪಡೆಯುವುದರಿಂದಷ್ಟೇ ಉಗ್ರ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಉಗ್ರ ಕೃತ್ಯಗಳ ಬಗ್ಗೆ ತೋರುತ್ತಿರುವ ಮೃದು ಧೋರಣೆಯಿಂದ ಭಾರತಕ್ಕೆ ಸಮಸ್ಯೆಯಾಗುತ್ತಿರುವಂತೆ, ಪಾಕಿಸ್ತಾನಕ್ಕೂ ತೊಂದರೆಯಾಗುತ್ತಿದೆ ಎಂಬುದನ್ನು ಪಾಕ್ಗೆ ಮನವರಿಕೆ ಮಾಡಿಕೊಡುವುದು ದೊಡ್ಡ ಸವಾಲಾಗಿದೆ’ ಎಂದು ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.
ಯಾವುದೇ ರೀತಿಯ ದಾಳಿಗಳನ್ನು ಭಾರತವು ಯುದ್ಧದ ಕೃತ್ಯಗಳೆಂದೇ ಪರಿಗಣಿಸಲಿದೆ. ಹಾಗಾಗಿ, ಪಾಕಿಸ್ತಾನವು ತನ್ನ ನೆರೆ ರಾಷ್ಟ್ರವನ್ನು ಯುದ್ಧಕ್ಕೆ ಆಹ್ವಾನಿಸಲು ಬಯಸುತ್ತದೆಯೇ ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.