ಹೊಸದಿಗಂತ ವರದಿ ವಿಜಯಪುರ:
ಎಚ್.ಡಿ. ಕುಮಾರಸ್ವಾಮಿ ಮತ್ತೇ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023 ರಲ್ಲಿ ಸಮ್ಮಿಶ್ರ ಸರ್ಕಾರ ಬರುತ್ತದೆ. ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದು ಪಕ್ಕಾ ಎಂದರು.
ನನ್ನ ಸಮೀಕ್ಷೆಯಲ್ಲಿ ಸಮ್ಮಿಶ್ರ ಸರ್ಕಾರ ಆಗುತ್ತದೆ. ಯಾರು ಏನೇ ಹೇಳಿದರು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಯಾರ ಜೊತೆಗೆ ಸಮ್ಮಿಶ್ರ ಆಗುತ್ತದೆ ಎನ್ನುವುದು ಮುಹೂರ್ತ ಕೂಡಿ ಬಂದಾಗಲೇ ತಿಳಿಯುತ್ತದೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ಜೆಡಿಎಸ್’ನ ಜೀತದಾಳು ನಾನು. ಆ ಪಕ್ಷದಿಂದಲೇ ಸ್ಪರ್ಧೆ ಮಾಡುವೆ ಎಂದರು. ಜೀತದಾಳು ಎಂದರೆ ಏನು ? ಜೀತದಾಳು ಪದಪ್ರಯೋಗ ಸರಿಯೇ ಎಂದು ಪ್ರಶ್ನಿಸುತ್ತಿದ್ದಂತೆ, ಜೆಡಿಎಸ್’ನ ಮನೆಮಗ ಎಂದು ತಮ್ಮ ಮಾತಿನ ವರಸೆ ಬದಲಿಸಿ, ಸಮಜಾಯಿಸಿ ನೀಡಿದರು.
ಆರ್. ವಸಂತಕುಮಾರ, ಗುಲಾಬ್ ಚವ್ಹಾಣ, ರವಿ ಚವ್ಹಾಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ