ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಯಾತ್ರಿಕರ ನೆಚ್ಚಿನ ಐತಿಹಾಸಿಕ ತಾಣ ಗಡಾಯಿಕಲ್ಲಿಗೆ ಮೇ ೨೩ರಂದು ಸಂಜೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ.
ಸಂಜೆ ತಾಲೂಕಿನಾದ್ಯಂತ ಸಿಡಿಲು ಸಹಿತ ಮಳೆ ಬಂದಿದ್ದು, ಗಡಾಯಿಕಲ್ಲಿನ ಒಂದು ಭಾಗಕ್ಕೆ ಸಿಡಿಲು ಬಡಿದಿದೆ. ಇದರಿಂದಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಅದಾಗಾಲೆ ಮಳೆ ಆರಂಭಗೊಂಡಿದ್ದರಿಂದ ಬೆಂಕಿ ನಂದಿ ಹೋಗಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷವೂ ಇದೇ ಭಾಗಕ್ಕೆ ಸಿಡಿಲು ಬಡಿದು, ಕಲ್ಲಿನ ಸ್ವಲ್ಪ ಭಾಗ ಸಿಡಿದು ಹೋಗಿತ್ತು. ಆಗ ದೊಡ್ಡ ಶಬ್ದವಾಗಿ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಈ ಭಾರಿ ಅಂತಹ ಶಬ್ದ ಕೇಳಿ ಬಂದಿಲ್ಲ ಎಂದು ಹೇಳಲಾಗಿದೆ.
ಸಿಡಿಲು ಬಡಿದು ಬೆಂಕಿ ಕಂಡು ಬಂದಾಗ ಸ್ಥಳೀಯರು ಇದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಗಡಾಯಿಕಲ್ಲಿನಲ್ಲಿ ಘಟನೆ ನಡೆದ ವೇಳೆ ಪ್ರವಾಸಿಗರು ಇದ್ದು ಅವರು ಅಲ್ಲಿಂದ ಕೂಡಲೇ ಕೆಳಗೆ ಬಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿಗಳಿಗೆ ವಿಚಾರ ತಿಳಿಸಿದರು.ಅವರು ಗಡಾಯಿಕಲ್ಲು ಮೇಲ್ಭಾಗಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು ಈ ವೇಳೆ ಬೆಂಕಿ ಇರಲಿಲ್ಲ.
ಚಂದ್ಕೂರು ಭಾಗದಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು ಗಡಾಯಿ ಕಲ್ಲು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಮೊಬೈಲ್ ನೆಟ್ ವರ್ಕ್ ಇಲ್ಲದ ಕಾರಣ ಹಾಗೂ ಮಳೆ,ಕತ್ತಲು ಕವಿದ ವಾತಾವರಣ ಇದ್ದ ಕಾರಣ ಸಂವಹನಕ್ಕೆ ಸಮಸ್ಯೆಯಾಯಿತು.
ಗಡಾಯಿಕಲ್ಲಿನ ಸುತ್ತಲೂ ಮೋಡ ಕವಿದ ವಾತಾವರಣವಿದ್ದು ಅದು ಹೊಗೆಯೋ ಅಥವಾ ಮೋಡವೋ ಎಂದು ತಿಳಿದು ಬರಲು ಕಷ್ಟವಾಯಿತು.