ಹೊಸದಿಗಂತ ಡಿಜಿಟಲ್ ಡೆಸ್ಕ್ :
ಜಮ್ಮುವಿನ ಶ್ರೀನಗರದ ಎಸ್.ಕೆ.ಸ್ಟೇಡಿಯಂನಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಸಮಾರೋಪ ಕಾರ್ಯಕ್ರಮ ನಡೆಯಿತು,
ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , ಭಾರತ್ ಜೋಡೋ ಯಾತ್ರೆಯಿಂದ ನಾನು ಸಾಕಷ್ಟು ಹೊಸ ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಪ್ರತಿದಿನ 6-7 ಗಂಟೆಗಳ ಕಾಲ ನಡೆಯಬೇಕಾಗಿತ್ತು. ಇದು ಸಾಕಷ್ಟು ಕಷ್ಟಕರವಾಗಿತ್ತು. ಯಾತ್ರೆಯ ವೇಳೆ ಅದೊಂದು ದಿನ ನನಗೆ ಬಹಳಷ್ಟು ನೊಂದುಕೊಂಡಿದ್ದೆ.ಈ ವೇಳೆ ಬಾಲಕಿಯೊಬ್ಬಳು ಬಂದು ತಬ್ಬಿಕೊಂಡು, ಏನೋ ಬರೆದಿದ್ದೇನೆ ಎಂದು ಹೇಳಿ ಓಡಿ ಹೋದಳು ಎಂದು ಹೇಳಿದರು.
ಯಾತ್ರೆಯ ವೇಳೆ ಬಾಲಕಿ ಬರೆದಿದ್ದನ್ನು ಓದಲು ಆರಂಭಿಸಿದೆ. ಅದರಲ್ಲಿ ನಿಮ್ಮ ಮೊಣಕಾಲು ನೋಯುತ್ತಿರುವುದನ್ನು ನಾನು ನೋಡಿದ್ದೇನೆ. ನಿಮ್ಮ ಕಾಲಿನ ಮೇಲೆ ಬಿದ್ದಿರುವ ಒತ್ತಡ, ಮುಖದ ಮೂಲಕ ಕಾಣುತ್ತಿದೆ. ನಾನು ನಿಮ್ಮೊಂದಿಗೆ ನಡೆಯಲು ಸಾಧ್ಯವಿಲ್ಲ. ಆದರೆ ನಿಮ್ಮ ಹೃದಯದ ಪಕ್ಕದಲ್ಲಿ ನಿಂತು ನಡೆಯುತ್ತೇನೆ. ನೀವು ನಮ್ಮ ಭವಿಷ್ಯಕ್ಕಾಗಿ ನಡೆಯುತ್ತಿದ್ದೀರಿ. ಇದರಲ್ಲಿ ನೀವು ಖಂಡಿತ ಯಶಸ್ವಿಯಾಗುತ್ತೀರಿ ಎಂದು ಬರೆದಿದ್ದಳು. ಇದನ್ನು ಓದಿ ಪೂರ್ಣಗೊಳ್ಳುವ ಮೊದಲೇ ನನ್ನ ಕಾಲು ನೋವು ಮಾಯವಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.
ಯಾತ್ರೆಯ ವೇಳೆ ನನ್ನ ಬಳಿಗೆ ನಾಲ್ಕು ಜನ ಮಕ್ಕಳು ಬಂದರು. ಅವರು ಭಿಕ್ಷಕರಾಗಿದ್ದರು. ಮಕ್ಕಳು ಚಳಿಯಿಂದ ನಡುಗುತ್ತಿದ್ದಂತೆ ನಾನು ಗಟ್ಟಿಯಾಗಿ ತಬ್ಬಿಕೊಂಡೆ. ಅವರು ಬಟ್ಟೆ, ಸ್ಟೆಟರ್ ಧರಿಸಿರಲಿಲ್ಲ. ಹೀಗಾಗಿ ಇನ್ನು ಮುಂದೆ ನಾನು ಕೂಡ ಚಳಿಗೆ ಬೆಚ್ಚಗಿರಲು ಬಟ್ಟೆ ಧರಿಸಬಾರದು ಎಂದು ನಿರ್ಧರಿಸಿದೆ ಎಂದು ರಾಹುಲ್ ಹೇಳಿದರು.