ಹೊಸ ದಿಗಂತ ವರದಿ, ಕಲಬುರಗಿ:
ಪವರ್ ಸ್ಟಾರ್, ಕರ್ನಾಟಕ ರತ್ನ ದಿ. ಡಾ. ಪುನೀತ್ ರಾಜಕುಮಾರ ಅವರು ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ ನಗರದಲ್ಲಿ ಅಪ್ಪು ಅಭಿಮಾನಿಗಳು ಕುಣಿದು ಕುಪ್ಪಳಿಸುವ ಮೂಲಕ ಪುನೀತ ಪರ್ವವನ್ನು ಅದ್ಧೂರಿಯಾಗಿ ಸಂಭ್ರಮಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸರ್ದಾರ್ ಪಟೇಲ್ ಮೂರ್ತಿಗೆ ಜೆಸಿಬಿಯಿಂದ ಪುಷ್ಪಾರ್ಚನೆ ಮಾಡಿದ ಬಳಿಕ ನಂತರ ಪವರ್ ಸ್ಟಾರ್ ಪುನೀತ್ರಾಜಕುಮಾರ ಬೃಹತ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಲಾಯಿತು.
ನಂತರ ಮಧ್ಯಾಹ್ನ 12.30ಕ್ಕೆ ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ, ಯುವಕರು ಅಪ್ಪು, ಅಪ್ಪು ಎಂಬ ಹರ್ಷೊದ್ಘಾರ ಎಲ್ಲೆಡೆ ಪಸರಿಸಿತು. ನಾನಾ ತಂಡಗಳಿಂದ ಅಪ್ಪು ಅಭಿನಯಿಸಿದ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಲಾಯಿತು.
ಮೆರವಣಿಗೆಯಲ್ಲಿ ಆಟೊಗಳ ಮೇಲೆ ಪುನೀತ್ ರಾಜಕುಮಾರ ಅವರ ನಾನಾ ಭಂಗಿಗಳ ಚಿತ್ರಗಳ ಮೆರವಣಿಗೆ ನಡೆಯಿತು.
ದಲಿತ ಸೈನ್ಯದ ರಾಜ್ಯಾಧ್ಯಕ್ಷ ಹಣಮಂತರಾವ ಯಳಸಂಗಿ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದಗಿ, ಹೋರಾಟಗಾರ ಎಂ.ಎಸ್.ಪಾಟೀಲ್ ನರಿಬೋಳ, ಪುನೀತ್ ರಾಜಕುಮಾರ ಹಾಗೂ ಡಾ.ರಾಜಕುಮಾರ ಅಭಿಮಾನಿಗಳು ಪಾಲ್ಗೊಂಡಿದ್ದರು.