ಹೊಸದಿಗಂತ ವರದಿ ಅಂಕೋಲಾ:
ಉಪ್ಪಿನಕಾಯಿ ಮಾವಿನಮಿಡಿ ಕೊಯ್ಯಲು ಮಾವಿನ ಮರ ಹತ್ತಿದ ವ್ಯಕ್ತಿಯೋರ್ವ ಕಾಲು ಜಾರಿ ಮರದಿಂದ ಕೆಳಗೆ ಬಿದ್ದು ಮೃತ ಪಟ್ಟಿರುವ ಘಟನೆ ತಾಲೂಕಿನ ಅಗಸೂರಿನಲ್ಲಿ ಘಟಿಸಿದೆ.
ಅಗಸೂರು ಬೆರಾಜಿಕೊಪ್ಪ ನಿವಾಸಿ ಕೂಲಿ ಕಾರ್ಮಿಕ ಲೋಕೇಶ ನಾಗಪ್ಪ ಗೌಡ (50) ಮೃತ ವ್ಯಕ್ತಿ. ಈತ ಮನೆಯ ಉಪಯೋಗಕ್ಕೆ ಉಪ್ಪಿನಕಾಯಿ ತಯಾರಿಕೆಗೆ ಮಾವಿನ ಮಿಡಿ ಕೊಯ್ಯಲು ರಾಮದಾಸ ನಾಯಕ ಎನ್ನುವವರ ತೋಟದ ಪಕ್ಕದಲ್ಲಿ ಹಳ್ಳದ ದಡದಲ್ಲಿರುವ ಮಾವಿನ ಮರ ಹತ್ತಿದ್ದ. ಮಾವಿನ ಕಾಯಿ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಮರದಿಂದ ಕೆಳಗೆ ಬಿದ್ದ ಪರಿಣಾಮ ತಲೆಯ ಹಿಂಬದಿಗೆ ತೀವ್ರವಾಗಿ ಗಾಯವಾಗಿದೆ. ಬಳಿಕ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ವೈದ್ಯರ ಸೂಚನೆ ಮೇರೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿ ಮೃತ ಪಟ್ಟಿರುವುದಾಗಿ ತಿಳಿಸಿದರು ಎನ್ನಲಾಗಿದೆ.
ಈ ಕುರಿತು ಮೃತ ವ್ಯಕ್ತಿಯ ಪತ್ನಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.