ಹೊಸದಿಗಂತ ವರದಿ, ವಿಜಯಪುರ:
ಏ. 29 ರಂದು ಪ್ರಧಾನಿ ನರೇಂದ್ರ ಮೋದಿ ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ನಗರದ ಸೈನಿಕ ಶಾಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಜಿಲ್ಲೆಯ 8 ಕ್ಷೇತ್ರದ ಸಾರ್ವಜನಿಕ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಒಂದು ಸರ್ವೇ ಪ್ರಕಾರ ರಾಜ್ಯದಲ್ಲಿ ಬಿಜೆಪಿ 105 ರಿಂದ 110 ಸ್ಥಾನ ಸ್ಥಾನ ಬರುತ್ತವೆ ಅಂತ ಇತ್ತು, ಆದರೆ ಪ್ರಧಾನಿ ಮೋದಿ ಬಂದ ಮೇಲೆ ಮತ್ತೆ 30 ರಿಂದ 40 ಸ್ಥಾನ ಹೆಚ್ಚಿಗೆ ಬರುತ್ತವೆ ಎಂದರು.
ಲಿಂಗಾಯತ ಡ್ಯಾಂ ಒಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ನಿಮ್ಮ ಹಣೆ ಬರಹಕ್ಕೆ ಮೇಕೆದಾಟು ಯೋಜನೆ ಮಾಡಲು ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಯತ್ನಾಳ ಹರಿಹಾಯ್ದರು.
ಲಿಂಗಾಯತರೆಲ್ಲರೂ ಭ್ರಷ್ಟರು ಎಂದು ಮಾಜಿ ಸಿಎಂ ಸಿದ್ರಾಮಯ್ಯ ಹೇಳಿದ್ದಾರೆ. ಇವರ ದ್ವೇಷ ಇದ್ದರೆ ವ್ಯಕ್ತಿಗತವಾಗಿ, ವಯಕ್ತಿಕವಾಗಿ ಒಬ್ಬರಿಗೆ ಮಾತಾಡಬೇಕು. ಅದು ಬಿಟ್ಟು ಎಲ್ಲಾ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬುದು ಎಷ್ಟು ಸರಿ. ಧರ್ಮ ಒಡೆಯಲು ನಿಂತವರಿಗೆ ಕಳೆದ ಬಾರಿ ಪಾಠ ಕಲಿಸಿದ್ದಾರೆ. ಹೀಗಾಗಿಯೇ ಹೋದ ಚುನಾವಣೆಯಲ್ಲಿ ಲಿಂಗಾಯತರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ತಾಕತ್, ಧಮ್ ಇದ್ದರೆ ಇನ್ನೊಮ್ಮೆ ಅಂದು ನೋಡಿ ಎಂದು ಡಿ.ಕೆ.ಶಿವಕುಮಾರಗೆ ಸವಾಲ್ ಹಾಕಿದರು.
ಅಲ್ಲದೇ, ಮೇ 10 ರಂದು ಕಾಂಗ್ರೆಸ್’ಗೆ ಉಳಿದ ಕೊನೆಯ ಮೊಳೆ ಹೊಡಿತಾರೆ ಎಂದರು.
ವಿಜಯಪುರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸ್ವಾಗತ ಮಾಡುತ್ತೇನೆ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತದೆ. ರಾಹುಲ್ ಗಾಂಧಿ ಅವರು ಬಿಜೆಪಿ ಸ್ಟಾರ್ ಕ್ಯಾಂಪೇನರ್ ಇದ್ದಂಗೆ ಅಂತ ಲೇವಡಿ ಮಾಡಿದರು.
ಮೊದಲು 15 ಸಾವಿರ ಲೀಡ್’ನಿಂದ ನಾ ಬರುತ್ತೇನೆ ಅಂತ ಅಂದುಕೊಂಡಿದ್ದೆ. ಈಗ ರಾಹುಲ್ ಗಾಂಧಿ ಬಂದರೆ ನಾನು 50 ಸಾವಿರ ಲೀಡ್ ಬರುತ್ತೇನೆ ಎಂದರು.