ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆರಾಯನ ಮುನಿಸನ್ನು ಕರಗಿಸಲು ಮತ್ತು ಪಟ್ಟಣದಲ್ಲಿ ಸಿಡುಬು, ಕಾಲರಾ, ದಡಾರ ಅಮ್ಮ ಇನ್ನೂ ಮುಂತಾದ ಸಾಂಕ್ರಾಮಿಕ ರೋಗಗಳು ಬಾರದಿರಲಿ ಎಂದು ಪ್ರತಿ ವರ್ಷ ಜನತೆಯು ವಿಭಿನ್ನ ರೀತಿಯಲ್ಲಿ ಆಚರಣೆಗಳನ್ನು ಮಾಡುವ ಮೂಲಕ ದೇವರ ಮೊರೆ ಹೋಗಿದ್ದಾರೆ.
ಹಾಗೆಯೇ ಮಳೆಗಾಗಿ ಪ್ರಾರ್ಥಿಸಿ ವಿಜಯನಗರದ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಕೇಲಮ್ಮನನ್ನು ಆಚರಿಸಲಾಯಿತು. ಪ್ರತಿ ಮನೆಗಳಿಂದ ಮಹಿಳೆಯರು ಹಬ್ಬದಂದು ಬೆಳಿಗ್ಗೆಯಿಂದಲೇ ಯಾವುದೇ ರೀತಿಯ ಆಹಾರ ಸೇವಿಸದೆ ಬಿದಿರಿನ ಮೊರಗಳಲ್ಲಿ ಹೋಳಿಗೆಗಳನ್ನು ಇಟ್ಟು ನಿರ್ದಿಷ್ಟ ಸ್ಥಳದಲ್ಲಿ ದೇವತೆಯ ಮುಂಭಾಗದಲ್ಲಿ ಸಾಲಾಗಿ ಇಡುತ್ತಾರೆ. ಹೋಳಿಗೆ ಜತೆಗೆ ಅರಿಶಿಣ, ಕುಂಕುಮ, ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳು ಇರುತ್ತದೆ. ಹೀಗೆ ಪ್ರತಿ ಮನೆಯಿಂದ ಹೋಳಿಗೆ ಮೊರಗಳು ಸಂಗ್ರಹವಾದ ನಂತರ ಪೂಜೆ ಮಾಡಿ ಮೊರಗಳನ್ನು ಶಕ್ತಿ ದೇವತೆಯ ಜತೆಗೆ ಕರೆದೊಯ್ದು ಪಟ್ಟಣದ ಸುಮಾರು ಒಂದು ಕೀ.ಮೀ ನಷ್ಟು ದೂರ ಗಡಿ ದಾಟಿಸಿ ಇತರೆ ಗ್ರಾಮಕ್ಕೆ ಬಿಟ್ಟು ಬರುತ್ತಾರೆ.ಆ ಗ್ರಾಮದವರು ಮುಂದಿನ ಗ್ರಾಮಕ್ಕೆ ಬಿಡುವುದು ಒಂದು ಪದ್ಧತಿಯಾಗಿದೆ.