ಹೊಸದಿಗಂತ ವರದಿ, ರಾಮನಗರ:
ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ನೇಮಿಸಲು 90 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಸಹಕಾರ ಸಂಘಗಳ ಸಹಾಯಕ ನಿಬಂಧಕ ವೆಂಕಟೇಶ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಹಾಲು ಉತ್ಪಾದಕರ ಸಂಘದ ಸಿಇಒ ಹುದ್ದೆಗೆ ಜಯಚಂದ್ರ ಎಂಬುವರು ಅರ್ಜಿ ಸಲ್ಲಿಸಿದ್ದರು.
ಈ ಹುದ್ದೆಗೆ ನೇಮಕ ಮಾಡಲು ₹1 ಲಕ್ಷ ಲಂಚಕ್ಕೆ ವೆಂಕಟೇಶ್ ಅರ್ಜಿದಾರರಿಗೆ ಬೇಡಿಕೆ ಇಟ್ಟಿದ್ದರು. ಅರ್ಜಿದಾರರು ಈ ಮೊದಲೇ ₹10 ಸಾವಿರ ಹಣ ನೀಡಿದ್ದು, ಈ ಸಂಬಂಧ ಎಸಿಬಿಗೆ ದೂರು ಸಲ್ಲಿಸಿದ್ದರು.
ಎಸಿಬಿ ಅಧಿಕಾರಿಗಳ ಸೂಚನೆ ಮೇರೆಗೆ ಅರ್ಜಿದಾರರು ಉಳಿದ ₹90 ಸಾವಿರ ಲಂಚ ನೀಡುತ್ತಿದ್ದ ವೇಳೆ ಡಿವೈಎಸ್ಪಿ ಶಂಕರ್ ಜೋಗಿನ್ ನೇತೃತ್ವದ ತಂಡವು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು.