ಹೊಸದಿಗಂತ ವರದಿ, ಕೊಪ್ಪಳ:
ಗಂಗಾವತಿ ಹಾಗೂ ಕಾರಟಗಿ ತಾಲ್ಲೂಕಿನ ದೇವಸ್ಥಾನಗಳ ಹುಂಡಿಗಳನ್ನು ಕದ್ದೋಯುತ್ತಿದ್ದ ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ಗಂಗಾವತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಬರಡ್ಡಿಕ್ಯಾಂಪ್’ನ ತಾಯಣ್ಣ ಅಲಿಯಾಸ್ ಬೋಸ್, ಪ್ರಕಾಶ ಗೋವಿಂದ ಬಾಬರಡ್ಡಿಕ್ಯಾಂಪ್, ಮಹೇಶ ನರಸಪ್ಪ ಗೋನಾಳ, ಬಂಧಿತ ಆರೋಪಿಗಳು.
ಜಂಗಮರ ಕಲ್ಗುಡಿ ಗ್ರಾಮದ ಕೋದಂಡರಾಮ ದೇವಸ್ಥಾನ, ಶ್ರೀರಾಮನಗರದ ಕನಕದುರ್ಗಾ ದೇವಸ್ಥಾನ, ಕೃಷ್ಣಾಪೂರ್ ಕ್ಯಾಂಪ್ ಗುಂಡೂರ್ ಕ್ರಾಸಿನಲ್ಲಿರುವ ಶ್ರೀರಾಮ ದೇವಸ್ವಾನ, ರುದೇಶ್ವರದ ನಗರದ ರುದ್ರೇಶ್ವರ ದೇವಸ್ಥಾನ, ವಡ್ಡರಹಟ್ಟಿ ಕ್ಯಾಂಪಿನ ರಾಮದೇವರ ದೇವಸ್ಥಾನ, ದಾಸನಾಳ ಗ್ರಾಮದ ಈಶ್ವರ ದೇವಸ್ಥಾನಗಳ ಹುಂಡಿ ಹೊಡೆದು ಮತ್ತು ಹುಂಡಿ ಸಮೇತವಾಗಿ ಕಳ್ಳತನವಾಗಿದ್ದರ ಬಗ್ಗೆ ಗ್ರಾಮೀಣ ಮತ್ತು ನಗರ ಹಾಗೂ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಆದರೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ.ಟಿ. ರವರ ಮಾರ್ಗದರ್ಶನದ ಮೇರೆಗೆ ಗಂಗಾವತಿ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಹಾಗೂ ಉದಯರವಿ ಸಿಪಿಐ ರವರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ ವೈಜ್ಞಾನಿಕ ತಂತ್ರಜ್ಞಾನದ ನೆರವಿನ ಚಾಣಾಕ್ಷತೆಯಿಂದ ಕಳ್ಳರನ್ನು ಸೇರೆಹಿಡಿಯಲಾಗಿದೆ.
ಒಟ್ಟು 6 ಪ್ರಕರಣಗಳನ್ನು ಭೇದಿಸಿ ಸದರಿ ಆರೋಪಿತರಿಂದ ದೇವಸ್ಥಾನದ ಹುಂಡಿಗಳ ಹಣ ಕಳ್ಳತನ ಮಾಡಿದ ನಗದು ಹಣ ಮತ್ತು ಕೃತ್ಯಕ್ಕೆ ಉಪಯೋಗಿಸಲಾದ ನಾಲ್ಕು ಮೊಬೈಲ್ ಫೋನ್ಗಳು ಮತ್ತು ಒಂದು ಮೊಟಾರ್ ಸೈಕಲ್ನ್ನು ಜಪ್ತಿ ಪಡಿಸಿಕೊಂಡು ಖತರ್ನಾಕ್ ಕಳ್ಳರನ್ನು ಜೈಲಿಗಟ್ಟಿದ್ದಾರೆ.