ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯ ಸೆಸ್ಮಿಕ್ ವಲಯದಲ್ಲಿ ಪದೇ ಪದೇ ಭೂ ಕುಸಿತ ಹಾಗೂ ಭೂ ಕಂಪದ ಸೂಚನೆಗಳು ಬರುತ್ತಿದ್ದು, . ಸೆಸ್ಮಿಕ್ ಅಧ್ಯಯನ ಮಾಡಲು ರಾಷ್ಟ್ರದ ಪ್ರಮುಖ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಾರ ನ್ಯಾಷನಲ್ ಜಿಯೋಗ್ರಾಫಿಕ್ ಸಂಸ್ಥೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಟೀರಿಯಲ್ ಹಾಗೂ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಬೆಂಗಳೂರು ಹಾಗೂ ಮೈಸೂರು ವಿವಿಗಳ ಜಿಯೋಲಾಜಿಕಲ್ ವಿಭಾಗದವರು ಈ ಬಗ್ಗೆ ಅಧ್ಯಯನ ಕೈಗೊಳ್ಳಲಿದ್ದಾರೆ. ಅದರ ಆಧಾರದ ಮೇಲೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.
ಸೆಸ್ಮಿಕ್ ವಲಯ ಮುಂದುವರೆಯುವಲ್ಲಿ ಜನವಸತಿ ಆಗದಂತೆ ಕ್ರಮ ವಹಿಸಲಾಗುವುದು. ಕೆಲವು ಕಡೆ ಮನೆಗಳಿಗೆ ರೆಟ್ರೋ ಫಿಟ್ಟಿಂಗ್ ಮಾಡಿ ರಕ್ಷಣೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.
ಭೂಕುಸಿತವಾಗಿರುವ ಸ್ಥಳಗಳ ಬಗ್ಗೆ ಅಮೃತಾ ವಿಶ್ವವಿದ್ಯಾಲಯದವರು ಅಧ್ಯಯನ ಕೈಗೊಂಡು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಭೂಕುಸಿತವನ್ನು ತಡೆಗಟ್ಟಲು ಹಲವಾರು ತಂತ್ರಜ್ಞಾನವಿದೆ. ರಿವಿಟ್ಟಿಂಗ್, ರೀಟೈನಿಂಗ್ ಗೋಡೆ ಕಟ್ಟುವಂತಹ ತಂತ್ರಜ್ಞಾನವಿದೆ. ಯಾವುದನ್ನು ಬಳಸಬೇಕೆಂದು ಸಲಹೆ ಮಾಡುತ್ತಾರೋ ಅದನ್ನು ಕೂಡಲೇ ಪ್ರಾರಂಭಿಸಿ ಮುಂದಿನ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.