ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ಪ್ರಚಾರದ ಅಬ್ಬರ ಜೋರಾಗಿ ನಡೆಯುತ್ತಿದ್ದೆ. ಸಿನಿಮಾ ಸ್ಟಾರ್ಗಳೂ ಕೂಡ ಅಭ್ಯರ್ಥಿಗಳ ಪರ ಮತಬೇಟೆಗೆ ಕ್ಷೇತ್ರ ಸುತ್ತುತ್ತಿದ್ದಾರೆ. ಅದೇ ರೀತಿ ಬಿಜೆಪಿ ಪರ ಪ್ರಚಾರದ ಕಣಕ್ಕಿಳಿದಿರುವ ನಟ ಕಿಚ್ಚ ಸುದೀಪ್ ಇಂದು (ಏ. 27) ಬಳ್ಳಾರಿ, ಹಾವೇರಿ ಜಿಲ್ಲೆಯ ಹಲವೆಡೆಗಳಲ್ಲಿ ಬಿರುಸಿನ ಪ್ರಚಾರ ಮಾಡಲಿದ್ದಾರೆ.
ಇಂದು ಬಳ್ಳಾರಿ ಜಿಲ್ಲೆಯ ಹಲವೆಡೆಗಳಲ್ಲಿ ಸುದೀಪ್ ಪ್ರಚಾರ ಮಾಡಲಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ ನಾಯಕ್ ಅವರ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಕೊಟ್ಟೂರಿಗೆ ಹೆಲಿಕಾಪ್ಟರ್ನಲ್ಲಿ ಆಗಮಿಸಿ, ಹೊಸಪೇಟೆ ರಸ್ತೆ, ರಾಮಲಿಂಗೇಶ್ವರ ದೇವಸ್ಥಾನ, ಸಂತೆ ಮೈದಾನದ ಕಡೆಯಿಂದ ಮದಕರಿ ವೃತ್ತದವರೆಗೂ ಸುದೀಪ್ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಜಿಲ್ಲೆ ಮತ್ತು ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಅಪಾರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಕೂಡ್ಲಿಗಿ ಪ್ರಚಾರ ಮುಗಿಯುತ್ತಿದ್ದಂತೆ, ನೇರವಾಗಿ ಹಾವೇರಿಗೆ ತೆರಳಲಿದ್ದಾರೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಸಿ.ಪಾಟೀಲ್ ಪರವಾಗಿ ಪ್ರಚಾರ ಕಣಕ್ಕಿಳಿಯಲಿದ್ದಾರೆ. ಅದಾದ ಮೇಲೆ ಬ್ಯಾಡಗಿಯ ವಿರೂಪಾಕ್ಷಪ್ಪ, ರಾಣೆಬೆನ್ನೂರಿನ ಅರುಣ್ ಪೂಜಾರ, ಕುಂದಗೋಳದಲ್ಲಿ ಎಂ.ಆರ್ ಪಾಟೀಲ್ ಪರ ಸುದೀಪ್ ಕ್ಯಾಂಪೇನ್ ಮಾಡಲಿದ್ದಾರೆ.