ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ನಟ ರಣ್ಬೀರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಆಕ್ಟಿಂಗ್ ಮಾಡ್ತಿದ್ದಾರೆ.
ರಣ್ಬೀರ್ ಕಪೂರ್ ನಟನೆಯ ರಾಮಾಯಣ ಕತೆ ಆಧರಿಸಿದ ಸಿನಿಮಾದ ಶೂಟಿಂಗ್ ಚಾಲ್ತಿಯಲ್ಲಿದೆ. ಹಿರಿಯ ನಿರ್ದೇಶಕ ನಿತೀಶ್ ತಿವಾರಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಕೆಲವು ಫೋಟೊಗಳಷ್ಟೆ ಇದೀಗ ಹೊರಗೆ ಬಂದಿವೆ. ಸಿನಿಮಾದ ಬಿಡುಗಡೆಗೆ ಕನಿಷ್ಟ ಒಂದು ವರ್ಷವಾದರೂ ಇದೆ. ಆಗಲೇ ಸಿನಿಮಾದ ಬಗ್ಗೆ ಋಣಾತ್ಮಕ ಮಾತುಗಳು ಆರಂಭವಾಗಿವೆ. ಇದೀಗ ಹಿರಿಯ ನಟರೊಬ್ಬರು ‘ರಣ್ಬೀರ್ ಕಪೂರ್ ಅನ್ನು ರಾಮನಾಗಿ ಜನ ಒಪ್ಪಲ್ಲ’ ಎಂದಿದ್ದಾರೆ.
ಇಡೀ ದೇಶದ ಮೆಚ್ಚುಗೆ ಗಳಿಸಿದ್ದ ರಾಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದ ಸುನಿಲ್ ಲಹರಿ ಇದೀಗ ರಣ್ಬೀರ್ ಕಪೂರ್ ಅವರ ರಾಮಾಯಣದ ಬಗ್ಗೆ ಹೇಳಿಕೆ ನೀಡಿದ್ದು, ‘ಅನಿಮಲ್’ ಸಿನಿಮಾದ ನಂತರ ರಣ್ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಜನ ಒಪ್ಪುವುದಿಲ್ಲ ಎಂದಿದ್ದಾರೆ. ‘ರಣ್ಬೀರ್ ಕಪೂರ್ ಸ್ಮಾರ್ಟ್ ಆಗಿದ್ದಾರೆ, ಬಹಳ ಒಳ್ಳೆಯ ನಟ ಆದರೂ ಸಹ ಅವರ ವ್ಯಕ್ತಿತ್ವ ರಾಮನ ಪಾತ್ರಕ್ಕೂ ಹೊಂದುವುದಿಲ್ಲ. ‘ಅನಿಮಲ್’ ಅಂಥಹಾ ಸಿನಿಮಾದಲ್ಲಿ ನಟಿಸಿದ ಬಳಿಕ ರಣ್ಬೀರ್ ಅನ್ನು ರಾಮನ ಪಾತ್ರದಲ್ಲಿ ಜನ ಒಪ್ಪುವುದಿಲ್ಲ’ ಎಂದಿದ್ದಾರೆ.