ಹೊಸದಿಗಂತ ವರದಿ ಮಡಿಕೇರಿ:
ಕನ್ನಡದ ಬೇಡಿಕೆಯ ನಟಿ, ಅಚ್ಚ ಕನ್ನಡತಿ ಅದಿತಿ ಪ್ರಭುದೇವ ನವೆಂಬರ್ 28ರಂದು ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಮೂಲತಃ ಸೋಮವಾರಪೇಟೆಯ ಆಂಜನೇಯ ದೇವಾಲಯ ರಸ್ತೆ ನಿವಾಸಿ ಬೆಂಗಳೂರಿನಲ್ಲಿ ನೆಲೆಸಿರುವ ಕಾಫಿ ಬೆಳೆಗಾರ ಚಂದ್ರಕಾಂತ್ ಹಾಗೂ ಸುಚರಿತಾ ದಂಪತಿಯ ಪುತ್ರ ಯಶಸ್ ಅವರನ್ನು ವರಿಸುವ ಮೂಲಕ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.
ನವೆಂಬರ್ 27ರಂದು ರಾತ್ರಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ ಗ್ರಾಂಡ್ ಗೇಟ್ 4ರಲ್ಲಿ ಆರತಕ್ಷತೆ ನಡೆಯಲಿದ್ದು, ನ.28 ರಂದು ವಿವಾಹ ಮಹೋತ್ಸವ ನಡೆಯಲಿದೆ. ಅಚ್ಚಕನ್ನಡತಿ, ಕೃಷಿಯಲ್ಲಿ ಆಸಕ್ತಿ ಇರುವ, ಗ್ರಾಮೀಣ ಸೊಗಡಿನ ಇಚ್ಛೆಯುಳ್ಳ ಅದಿತಿ ಕಾಫಿ ಬೆಳೆಗಾರ ಯಶಸ್ ಅವರನ್ನು ವರಿಸುವ ಮೂಲಕ ಕೊಡಗಿನ ಸೊಸೆಯಾಗುತಿದ್ದಾರೆ.
ವಧು ಹಾಗೂ ವರನ ಮನೆಯಲ್ಲಿ ಮದುವೆ ಸಿದ್ಧತೆ ಜೋರಾಗಿ ನಡೆದಿದ್ದು, ಆಹ್ವಾನ ಪತ್ರಿಕೆ ಹಂಚಲಾಗುತ್ತಿದೆ. ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಅದಿತಿ, ಮದುವೆಗಾಗಿ ಒಂದಷ್ಟು ದಿನ ಚಿತ್ರೀಕರಣದಿಂದ ದೂರ ಉಳಿಯಲಿದ್ದಾರೆ.