ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಅಫ್ತಾಬ್ ಕ್ರೂರತೆ ಬಿಂಬಿಸುವ ಮತ್ತೊಂದು ಮಾಹಿತಿ ಹೊರಬಿದ್ದಿದೆ.
ಅಫ್ತಾಬ್ ಶ್ರದ್ಧಾಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ದಿನವೂ ದೆಹಲಿಯ ಕಾಡುಗಳಲ್ಲಿ ದೇಹದ ತುಂಡುಗಳನ್ನು ಎಸೆದುಬರುತ್ತಿದ್ದ. ಇದೀಗ ಬರೀ ದೆಹಲಿಯಲ್ಲಿ ಅಷ್ಟೇ ಅಲ್ಲ, ಉತ್ತರಾಖಂಡದ ಡೆಹ್ರಾಡೂನ್ನಲ್ಲಿಯೂ ಅಫ್ತಾಬ್ ಶ್ರದ್ಧಾಳ ಮೃತದೇಹದ ತುಂಡುಗಳನ್ನು ಎಸೆದಿರುವ ಬಗ್ಗೆ ಮಾಹಿತಿ ದೊರಕಿದೆ.
ಪಾತಕಿ ಅಫ್ತಾಬ್ ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಡುತ್ತಿದ್ದಾನೆ. ದೆಹಲಿಯಷ್ಟೇ ಅಲ್ಲ, ಡೆಹ್ರಾಡೂನ್ನಲ್ಲಿಯೂ ದೇಹದ ತುಂಡುಗಳನ್ನು ಎಸೆದಿದ್ದೇನೆ ಎಂದು ಅಫ್ತಾಬ್ ಹೇಳಿದ್ದಾನೆ. ತಲೆಯ ಭಾಗ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದು, ಡೆಹ್ರಾಡೂನ್ನಲ್ಲಿ ತಲೆಯ ಭಾಗವನ್ನು ಎಸೆದಿರುವ ಸಾಧ್ಯತೆ ಇದೆ.
ತನಿಖೆಯ ಭಾಗವಾಗಿ ಶ್ರದ್ಧಾಳ ಸ್ನೇಹಿತರು ಹಾಗೂ ಆಕೆ ಕೆಲಸ ಮಾಡುತ್ತಿದ್ದ ಕಂಪನಿಯ ಮ್ಯಾನೇಜರ್ನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಶ್ರದ್ಧಾ ಮಾಡಿದ್ದ ಮೆಸೇಜ್ಗಳನ್ನು ಮ್ಯಾನೇಜರ್ ಪೊಲೀಸರಿಗೆ ತೋರಿಸಿದ್ದಾರೆ. ಕೊಂದುಬಿಡುತ್ತೇನೆ ಎಂದು ಅಫ್ತಾಬ್ ಹೇಳಿದ ಬಗ್ಗೆ ಶ್ರದ್ಧಾ ಮ್ಯಾನೇಜರ್ ಬಳಿ ಮಾತನಾಡಿದ್ದಾರೆ.
ಇಷ್ಟೇ ಅಲ್ಲದೆ, ಕೆಲಸಕ್ಕೆ ಬರಲು ಆಗುವುದಿಲ್ಲ ಏಕೆಂದರೆ ಅಫ್ತಾಬ್ ನನ್ನನ್ನು ಹೊಡೆದಿದ್ದಾನೆ. ಬಿಪಿ ಕಡಿಮೆಯಾಗಿದೆ. ಹೊಡೆತದಿಂದ ತುಂಬಾ ನೋವಾಗಿದೆ. ಹಾಸಿಗೆಯಿಂದ ಎದ್ದೇಳಲೂ ಆಗುತ್ತಿಲ್ಲ. ಅವನು ಮನೆಯಿಂದ ಹೊರಹೋಗಲಿ, ನಾನು ಪೊಲೀಸರಿಗೆ ದೂರು ನೀಡುತ್ತೇನೆ. ಮಹಿಳಾ ಸಂಘಟನೆಯನ್ನೂ ಸಂಪರ್ಕಿಸುತ್ತೇನೆ. ನನಗೆ ಸಹಾಯ ಮಾಡಿ ಸರ್ ಎಂದು ಕೇಳಿಕೊಂಡಿದ್ದಾರೆ. ಗಾಯಗೊಂಡ ಫೋಟೊವನ್ನು ಕಳಿಸಿ ರಜೆ ಮನವಿ ಮಾಡಿದ್ದಾರೆ.