ಹೊಸದಿಗಂತ ವರದಿ, ಮಂಡ್ಯ:
ಕೃಷಿ ಕ್ಷೇತ್ರದಲ್ಲಿ ಕೂಲಿಕಾರರಿಗೆ ನಿಗದಿ ಮಾಡಿರುವ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೂ ಅನ್ವಯಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜೀವನ ನಡೆಸಲು ಬೇಕಾದ ಅಗತ್ಯ ವಸ್ತುಗಳ ಬೆಲೆ ಪ್ರತಿನಿತ್ಯ ಏರುತ್ತಿದೆ. ಅಡುಗೆ ಎಣ್ಣೆ ಬೆಲೆಯೂ 200 ರೂ. ಮುಟ್ಟುತ್ತಿದೆ. ಮನರೇಗಾ ಕೆಲಸದಲ್ಲಿ ತೊಡಗಿರುವ ಕೂಲಿಕಾರರಿಗೆ ನ್ಯಾಯಬದ್ಧ ಕೂಲಿಯನ್ನು ನೀಡದೆ ವಂಚಿಸುತ್ತಿದೆ.
ಏ. 1ರಿಂದ ಮನರೇಗಾ ಕೂಲಿಯನ್ನು 289ರೂ.ಗಳಿಗೆ ಏರಿಸಿದೆ. ಇದು ಅತ್ಯಂತ ಕಡಿಮೆ ಕೂಲಿಯಾಗಿದೆ. ಏ. 1ರಲಿಲ ಕರ್ನಾಟಕ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಕೂಲಿ ಮಾಡುವವರಿಗೆ ಕನಿಷ್ಠ ಕೂಲಿ 424 ರೂ.ಗಳನ್ನು ಜಾರಿ ಮಾಡಿದ್ದು, ಕೇಂದ್ರ ಸರ್ಕಾರ ಮನರೇಗಾದಲ್ಲಿ 289ರೂ. ಮಾಡಿರುವುದು ಸರಿಯಲ್ಲ, ಕರ್ನಾಟಕ ಸರ್ಕಾರವು ಜಾಣ ವೌನವಾಗಿದ್ದು, ಕೂಲಿ ಸರಿಪಡಿಸಿ ನೀಡಬೇಕೆಂದು ಒತ್ತಾಯಿಸಿದರು.
ಮನರೇಗಾ ಖಾಯಿದೆ ಪ್ರಕಾರ ಆಯಾ ರಾಜ್ಯದಲ್ಲಿರುವ ಶಾಸನಬದ್ಧ ಕನಿಷ್ಠ ಕೂಲಿಗಿಂತ ಉದ್ಯೋಗಖಾತ್ರಿ ಯೋಜನೆಯಡಿ ನೀಡುವ ಕೂಲಿ ದರ ಕಡಿಮೆ ಇರಬಾರದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಅದರಂತೆ ಜಾರಿ ಮಾಡುವಂತೆ ಆಗ್ರಹಿಸಿದರು.