ಹೊಸದಿಗಂತ ವರದಿ,ಶಿವಮೊಗ್ಗ:
ಜಿಪಂ ಸಿಇಒ ಪಿಡಿಒ ಅಮಾನತು ಮಾಡಿರುವುದನ್ನು ವಿರೋಧಿಸಿ ತಾಲೂಕಿನ ಚೋರಡಿ ಗ್ರಾಪಂ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಗ್ರಾಪಂ ಒತ್ತುವರಿ ಜಾಗ ತೆರವಿಗೆ ಸೋಮವಾರ ಪಿಡಿಒ ಮತ್ತು ಸದಸ್ಯರು ತೆರಳಿದ್ದರು. ಈ ವೇಳೆ ಮಹಿಳೆಯೋರ್ವರು ವಿಷ ಸೇವಿಸಿದ್ದರು. ಬಳಿಕ ಡಿಎಸ್ಎಸ್ ಹಾಲೇಶಪ್ಪ ಬಣ ಜಿಪಂ ಎದುರು ಪ್ರತಿಭಟನೆ ನಡೆಸಿತ್ತು. ಆಗ ಜಿಪಂ ಸಿಇಒ ಪ್ರಕಾಶ್ ಗ್ರಾಪಂ ಪಿಡಿಒ ಗೋಪಾಲ ಆಚಾರಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಕೆರಳಿದ ಗ್ರಾಪಂ ಸದಸ್ಯರು
ಇದು ಗ್ರಾಪಂ ಸದಸ್ಯರನ್ನು ಕೆರಳಿಸಿತ್ತು. ಯಾವುದೇ ತಪ್ಪು ಪಿಡಿಒ ಮಾಡಿಲ್ಲ. ಹಾಗಿದ್ದೂ ಒಳ್ಳೆಯ ಅಧಿಕಾರಿಗೆ ಶಿಕ್ಷೆ ಆಗಿದೆ. ತಕ್ಷಣ ಸಿಇಒ ಸ್ಥಳಕ್ಕೆ ಬರಬೇಕು. ಅಮಾನತು ವಾಪಸ್ ಪಡೆಯಬೇಕು ಎಂದು ಬೆಳಗ್ಗಿನಿಂದ ಧರಣಿ ನಡೆಸಿದ್ದರು.
ಫಲಿಸದ ಮನವೊಲಿಕೆ
ಜಿಪಂ ಸಿಇಒ ಬೆಂಗಳೂರಿಗೆ ತೆರಳಿರುವುದರಿಂದ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತಾಪಂ ಇಒ ಅವಿನಾಶ್ ಸಂಜೆ ಆಗಮಿಸಿ ಗ್ರಾಪಂ ಸದಸ್ಯರ ಮನವೊಲಿಸಲು ಯತ್ನಿಸಿದರು. ಇದಕ್ಕೆ ಸದಸ್ಯರು ಒಪ್ಪಲಿಲ್ಲ. ಸಿಇಒ ಅವರೇ ಬರಬೇಕು, ಒತ್ತುವರಿ ತೆರವು ಮಾಡಿರುವ ಜಾಗ ವೀಕ್ಷಿಸಿ ನ್ಯಾಯ ಹೇಳಬೇಕು ಎಂದು ಒತ್ತಾಯಿಸಿ ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.