ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಾರ್ ಧಾಮ್ ಯಾತ್ರೆ ಕೈಗೊಂಡ ರಾಜ್ಯದ ಯಾತ್ರಾರ್ಥಿಗಳಿಗೆ ನೀಡಲಾಗುವ ಸರ್ಕಾರದ ಸಹಾಯಧನ ಪಡೆಯಲು ಅರ್ಜಿ ಸಲ್ಲಿಕೆಯ ದಿನಾಂಕವನ್ನು ಹಜ್ ಮತ್ತು ವಕ್ಪ್ ಸಚಿವೇ ಶಶಿಕಲಾ ಜೊಲ್ಲೆ ಅವರ ಸೂಚನೆ ಮೇರೆಗೆ 2023ರ ಜನವರಿ 31 ವರೆಗೆ ವಿಸ್ತರಿಸಲಾಗಿದೆ.
ಕರ್ನಾಟಕ ರಾಜ್ಯದಿಂದ ಪ್ರಪ್ರಥಮ ಬಾರಿಗೆ ಚಾರ್ಧಾಮ್ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ 20 ಸಾವಿರದಂತೆ ಸರಕಾರದ ಸಹಾಯಧನ ನೀಡಲಾಗುತ್ತದೆ. ಇದಕ್ಕೆ ಡಿಸೆಂಬರ್ 1 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಈ ಬಾರಿ ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಸಂದರ್ಭ ಜನಸಂಧಣಿ ಹೆಚ್ಚಾಗಿದ್ದರಿಂದ ಹಾಗೂ ತಾಂತ್ರಿಕ ಕಾರಣಗಳಿಂದ ಯಾತ್ರಾರ್ಥಿಗಳು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳನ್ನ ಪಡೆದುಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಬೆಳಗಾವಿಯ ಅಧಿವೇಶನದಲ್ಲಿ ಹಲವಾರು ಶಾಸಕರು ಸಚಿವರಿಗೆ ಮನವಿ ಮಾಡಿದ್ದರು. ಹೆಚ್ಚಿನ ಜನರು ಅರ್ಜಿ ಸಲ್ಲಿಸಲಿ ಎನ್ನುವ ಉದ್ದೇಶದಿಂದ, ಹಾಗೂ ಅಗತ್ಯ ದಾಖಲೆಗಳನ್ನ ಕ್ರೋಢೀಕರಿಸಲು ಅವಕಾಶ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ, ಹಜ್ ಮತ್ತು ವಕ್ಪ್ ಸಚಿವೆ ಶಶಿಕಲಾ ಜೊಲ್ಲೆ ಅವರ ಸೂಚನೆಯಂತೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಒಂದು ತಿಂಗಳುಗಳ ಕಾಲ ವಿಸ್ತರಿಸಲಾಗಿದೆ.