ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮನ್ ಕಿ ಬಾತ್ ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಗರಿಕರೊಂದಿಗೆ ಸಂಪರ್ಕ ಸಾಧಿಸುವ ಪ್ರಮುಖ ಸಂವಹನವಾಗಿದ್ದು, ಈ ಕಾರ್ಯಕ್ರಮವು ಭಾರತೀಯರ ಮೇಲೆ ಬಹಳಷ್ಟು ಪ್ರಭಾವ ಬೀರಿದೆ ಎಂದು ನಟ ಅಮೀರ್ ಖಾನ್ ಹೇಳಿದರು.
ಇಂದು ನವದೆಹಲಿಯಲ್ಲಿ ನಡೆದ “ಮನ್ ಕಿ ಬಾತ್ @100” ರಾಷ್ಟ್ರೀಯ ಸಮಾವೇಶದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಭಾಗಿಯಾಗಿದ್ದರು. ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮನ್ ಕಿ ಬಾತ್ ಭಾರತದ ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿದೆ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು.
ಇಂದು ನಡೆದ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಉದ್ಘಾಟಿಸಿದರು. ಈ ವೇಳೆ ಪ್ರಸಾರ ಭಾರತಿಯ ಮಾಜಿ ಸಿಇಒ ಎಸ್.ಎಸ್.ವೆಂಪಾಟಿ ಅವರು ರಚಿಸಿರುವ ಕಲೆಕ್ಟಿವ್ ಸ್ಪಿರಿಟ್, ಕಾಂಕ್ರೀಟ್ ಆಕ್ಷನ್ ಎಂಬ ಪುಸ್ತಕವನ್ನು ಧನಕರ್ ಬಿಡುಗಡೆ ಮಾಡಿದರು. ಇಂದು ಕಾಫಿ ಟೇಬಲ್ ಪುಸ್ತಕ ‘ಮೈ ಡಿಯರ್ ಫೆಲೋ ಸಿಟಿಜನ್ಸ್’ ಅನ್ನು ಕೂಡ ಬಿಡುಗಡೆ ಮಾಡಿದರು. ಈ ಪುಸ್ತಕವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹೊರತಂದಿದೆ, ಇದು ಪ್ರಧಾನ ಮಂತ್ರಿಯವರ ಸಾಂಪ್ರದಾಯಿಕ ರೇಡಿಯೊ ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾದ 100ಕ್ಕೂ ಹೆಚ್ಚು ಸ್ಪೂರ್ತಿದಾಯಕ ಕಥೆಗಳ ತುಣುಕುಗಳನ್ನು ಪ್ರಸ್ತುತಪಡಿಸುತ್ತದೆ.
ಕಾರ್ಯಕ್ರಮದಲ್ಲಿ ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ, ನಟಿ ರವೀನಾ ಟಂಡನ್, ಭಾರತೀಯ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ಆಕಾಶವಾಣಿ, ದೂರದರ್ಶನ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನ ಮಂತ್ರಿಗಳ ಮಾಸಿಕ ರೇಡಿಯೋ ಕಾರ್ಯಕ್ರಮದ 100 ನೇ ಸಂಚಿಕೆಯನ್ನು ಏಪ್ರಿಲ್ 30 ರಂದು ಪ್ರಸಾರ ಮಾಡಲು ನಿರ್ಧರಿಸಲಾಗಿದೆ. 100ನೇ ಸಂಚಿಕೆಗೆ ಈಗಾಗಲೇ ವಿಶೇಷ ಸಿದ್ಧತೆಗಳು ಕೂಡ ನಡೆದಿದೆ.