ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೃತಯಾತ್ರೆ ಸಂದರ್ಭದಲ್ಲಿ ಭಾರತದಲ್ಲಿ ಸಾಧಿಸಿದ ಅಂಶಗಳಲ್ಲಿ ದೇಶದ ನೀರಾವರಿ ಪ್ರದೇಶದಲ್ಲಿಹೆಚ್ಚಳ ಸಾಧಿಸಿರುವುದೂ ಒಂದು. ಸ್ವಾತಂತ್ರ್ಯಾಪೂರ್ವದಲ್ಲಿ ಬರಡಾಗಿದ್ದ ಭಾರತದ ಅದೆಷ್ಟೋ ಪ್ರದೇಶಗಳಿಗೆ ಈಗ ನೀರುಣಿಸಲಾಗುತ್ತಿದೆ.
1951 ಸಂದರ್ಭದಲ್ಲಿ ಭಾರತದ ಒಟ್ಟೂ ನೀರಾವರಿ ಹೊಂದಿರುವ ಪ್ರದೇಶ 20.8ಲಕ್ಷ ಹೆಕ್ಟೇರ್ ಗಳಷ್ಟಿತ್ತು. 2018ರ ಹೊತ್ತಿಗೆ ಈ ಪ್ರದೇಶವು 69.4 ಲಕ್ಷ ಹೆಕ್ಟೇರ್ ಗಳಷ್ಟಾಗಿದೆ. ಅಂದರೆ ಸ್ವಾತಂತ್ರ್ಯ ಬಂದು 75 ವರ್ಷಗಳ ಹೊತ್ತಿಗೆ ನೀರಾವರಿ ಪ್ರದೇಶಗಳು 3 ಪಟ್ಟು ಹೆಚ್ಚಾಗಿದೆ. ನೀರಾವರಿ ಪ್ರದೇಶಗಳಲ್ಲಿನ ಹೆಚ್ಚಳವು ಕೃಷಿ ಕ್ಷೇತ್ರದ ವಿಸ್ತರಣೆಗೆ ಸಹಾಯಕವಾಗುತ್ತದೆ.
ಇನ್ನು ನೀರಿನ ಬಳಕೆಯನ್ನು ಹೆಚ್ಚಿಸಲು ಹನಿ ನೀರಾವರಿ, ಸಿಂಚನ ನೀರಾವರಿ ಇತ್ಯಾದಿಗಳನ್ನು ಬಳಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚನ ಯೋಜನೆಗಳಂಥವುಗಳ ಮೂಲಕ ಹೆಚ್ಚಿನ ಭೂಮಿಗೆ ನೀರುಣಿಸಿ ಹಸನಾಗಿಸಲಾಗುತ್ತಿದೆ.