ಹೊಸದಿಗಂತ ವರದಿ, ಕೊಡಗು:
ಹಿಟ್ಟಿನ ಗಿರಣಿ ಬೆಲ್ಟ್ ಗೆ ಸಿಲುಕಿದ ತಾಯಿಯನ್ನು 8 ವರ್ಷದ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.
ಬೆಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡೂರು ಗ್ರಾಮದಲ್ಲಿ ಹಿಟ್ಟಿನ ಗಿರಣಿಯ ಬೆಲ್ಟ್ ಗೆ ತಾಯಿ ಅರ್ಪಿತಾ ಸಿಲುಕಿಕೊಂಡಿದ್ದು, ಬಾಲಕ ದೀಕ್ಷಿತ್ (8) ಸಮಯ ಪ್ರಜ್ಞೆಯಿಂದ ರಕ್ಷಿಸಿದ್ದಾನೆ.
ಮನೆಯಲ್ಲಿ ಹಾಗೂ ಗಿರಣಿ ಅಂಗಡಿಯಲ್ಲಿ ಯಾರು ಇಲ್ಲದೇ ಇರುವಾಗ ಚಾಲನೆಯಲ್ಲಿದ್ದ ಗಿರಣಿಯ ಬೆಲ್ಟ್ ಗೆ ಆಕಸ್ಮಿಕವಾಗಿ ಅರ್ಪಿತಾ ಅವರ ತಲೆ ಸಿಲುಕಿಕೊಂಡಿದೆ. ಈ ಸಂದರ್ಭ ಅರ್ಪಿತಾ ಅವರು ಜೋರಾಗಿ ಕೂಗಿಕೊಂಡಿದ್ದು, ಹಿಟ್ಟಿನ ಗಿರಣಿ ಮುಂಭಾಗದ ಸ್ವಲ್ಪ ದೂರದಲ್ಲಿ ಅಟವಾಡುತ್ತಿದ್ದ ದೀಕ್ಷಿತ್ ತಾಯಿಯ ಕೂಗು ಕೇಳಿ ಓಡಿ ಬಂದಿದ್ದಾನೆ. ಸನ್ನಿವೇಶವನ್ನು ನೋಡಿ ಸಮಯಪ್ರಜ್ಞೆ ತೋರಿ ಹಿಟ್ಟಿನ ಗಿರಣಿಯ ಸ್ವಿಚ್ ಆಫ್ ಮಾಡಿದ್ದಾನೆ. ಆ ಮೂಲಕ ಪ್ರಾಣಾಪಾಯದಿಂದ ತನ್ನ ತಾಯಿಯನ್ನು ರಕ್ಷಿಸಿದ್ದಾನೆ.
ದೀಕ್ಷಿತ್, ಗಿರಣಿ ಮಾಲಕ ರವಿಕುಮಾರ್ ಮತ್ತು ಅರ್ಪಿತಾ ದಂಪತಿಯ ಪುತ್ರನಾಗಿದ್ದು, ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾನೆ.