ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಕಿನಾಡದಲ್ಲಿ ಸಂಚಲನ ಮೂಡಿಸಿದ್ದ ಕಾರು ಚಾಲಕ ಸುಬ್ರಮಣ್ಯಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವೈಎಸ್ಆರ್ಸಿಪಿ ಎಂಎಲ್ಸಿ ಅನಂತ ಸತ್ಯ ಉದಯ ಭಾಸ್ಕರ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಾಕಿನಾಡ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿದೆ. ಮುಂದಿನ ತಿಂಗಳ 6ರವರೆಗೆ ರಿಮಾಂಡ್ ಹೋಂನಲ್ಲಿರಿಸುವಂತೆ ಆದೇಶ ಹೊರಡಿಸಿದೆ. ಕೋರ್ಟ್ ಆದೇಶದ ಬಳಿಕ ಪೊಲೀಸರು ಅನಂತಬಾಬು ಅವರನ್ನು ಕಾಕಿನಾಡ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ರಾಜಮಂಡ್ರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಿದ್ದಾರೆ.
ಆದೇಶಕ್ಕೂ ಮೊದಲು ಅನಂತಬಾಬು ಅವರಿಗೆ ಜಾಮೀನು ನೀಡಬೇಕು ಎಂದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕೋರ್ಟ್ನಲ್ಲಿ ವಕೀಲರು ವಾದ ಮಂಡಿಸಿದರು. ಆದರೆ, ಪೊಲೀಸರ ವಾದಕ್ಕೆ ಸಮ್ಮತಿ ಸೂಚಿಸಿದ ಮ್ಯಾಜಿಸ್ಟ್ರೇಟ್, ಅನಂತ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ಮಾಡಲು ಆದೇಶಿಸಿದರು.
ಮೇ 19 ರ ಗುರುವಾರ ರಾತ್ರಿ 9.30 ರ ಸುಮಾರಿಗೆ ಅನಂತ ಭಾಸ್ಕರ್ ಅವರು ಸುಬ್ರಹ್ಮಣ್ಯಂಗೆ ಕರೆ ಮಾಡಿ ತಮ್ಮ ಬಳಿಗೆ ಕರೆಸಿಕೊಂಡಿದ್ದಾರೆ. ಮರುದಿನ ನಿಮ್ಮ ಮಗ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಭಾಸ್ಕರ್ ಹೇಳುತ್ತಿದ್ದಾರೆ. ನನ್ನ ಮಗನ ಸಾವು ಆಕಸ್ಮಿಕವಲ್ಲ ಇದೊಂದು ಕೊಲೆ ಎಂದು ಚಾಲಕ ಸುಬ್ರಹ್ಮಣ್ಯಂ ಕುಟುಂಬಸ್ಥರು ದೂರು ನೀಡಿದ್ದರು. ಮೇ 20 ರಂದು ಸಂತ್ರಸ್ತ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸರ್ಪವರಂ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.