ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಹತ್ಯೆ ನಿಷೇಧ ಕಾಯ್ದೆ ಕುರಿತು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ದಾಳಿ ಕೂಡ ನಡೆಯುತ್ತಿದೆ. ಇನ್ನು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಿಷೇಧಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ ಪ್ರಾಣಿಗಳನ್ನು ಕೊಲ್ಲಬಾರದು, ನಾನು ಪ್ರಾಣಿಹತ್ಯೆ ನಿಷೇಧದ ಪರ ಇದ್ದೇನೆ. ಆದರೆ ಸಂಪುಟದಲ್ಲಿ ಈ ಕುರಿತು ಮಾತನಾಡುವುದಿಲ್ಲ. 64 ಲಕ್ಷ ಜೀವ ರಾಶಿಗಳನ್ನೂ ಹತ್ಯೆ ಮಾಡಬಾರದೆಂಬ ನಿಲುವು ನನ್ನದು. 64 ಲಕ್ಷ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಗರ ಅಭಿವೃದ್ಧಿ ಬಗ್ಗೆ ಮುಕ್ತವಾಗಿ ಶಾಸಕರ ಜೊತೆ ಮಾತನಾಡುತ್ತೇವೆ. ಈ ಹಿಂದೆ ನಾವಿದ್ದಾಗ ಬಿಬಿಎಂಪಿ ಚುನಾವಣೆ ಸಮಯಕ್ಕೆ ಸರಿಯಾಗಿ ನಡೆದಿತ್ತು. ಈಗಲೂ ಬಿಬಿಎಂಪಿ ಚುನಾವಣೆ ಮಾಡುತ್ತೇವೆ. ಚುನಾಯಿತ ಪ್ರತಿನಿಧಿಗಳಿದ್ದರೆ ಕೆಲಸಗಳು ಸುಲಭವಾಗಿ ಸಾಗುತ್ತವೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣ ನಿಷೇಧ ಮಾಡಲ್ಲ
ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣ ನಿಷೇಧ ಮಾಡುವುದಿಲ್ಲ. ಬಿಜೆಪಿಯವರು ರೈತರಿಗೆ ಅನಾನುಕೂಲವಾಗು ರೀತಿ ಮಾಡಿದ್ದರು. ಆದರೆ ಈ ಕಾಯ್ದೆಯ ಮೂಲಕ ಬಿಜೆಪಿಯವರ ಸಂಘಟನೆಗಳು ವಸೂಲಿ ದಂಧೆ ಮಾಡಿಕೊಂಡಿದ್ದರು. ಆದರೆ ನಾವು ಕಾಯ್ದೆಯ ಕೆಲವು ನಿಯಮಗಳನ್ನು ಸಡಿಲಗೊಳಿಸುತ್ತೇವೆ ಎಂದು ತಿಳಿಸಿದರು.