ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕೇರಳದ ಪಾಲಕ್ಕಾಡ್ನ ವ್ಯಕ್ತಿಯೊಬ್ಬರು ಪೋಲೆಂಡ್ನಲ್ಲಿ ಶವವಾಗಿ ಪತ್ತೆಯಾದ ಕೆಲವೇ ದಿನಗಳಲ್ಲಿ, ಪೋಲೆಂಡ್ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ತ್ರಿಶೂರ್ ಜಿಲ್ಲೆಯ ಮತ್ತೊಬ್ಬ ಯುವಕನನ್ನು ಭಾನುವಾರ ಇರಿದು ಕೊಂದಿರುವ ವರದಿಗಳು ಬೆಳಕಿಗೆ ಬಂದಿವೆ.
ಒಲ್ಲೂರ್ (ತ್ರಿಶೂರ್) ನಿವಾಸಿ 23 ವರ್ಷದ ಸೂರಜ್ ಎಂಬಾತನನ್ನು ಜಾರ್ಜಿಯನ್ನರ ಗುಂಪು ಜಗಳದ ನಂತರ ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಯುವಕ ಕಳೆದ ಐದು ತಿಂಗಳಿಂದ ಪೋಲೆಂಡ್ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ದಾಳಿ ವೇಳೆ ಸೂರಜ್ ಜತೆಗಿದ್ದ ಕೇರಳದ ನಾಲ್ವರು ಯುವಕರೂ ಗಾಯಗೊಂಡಿದ್ದಾರೆ.
ಸೂರಜ್ ಅವರ ಎದೆ ಮತ್ತು ಕುತ್ತಿಗೆಗೆ ಆಳವಾಗಿ ಇರಿಯಲಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸ ಫಲಿಸದೆ ಸಾವನ್ನಪ್ಪಿದ್ದಾರೆ. ವಾರ್ಸಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸೂರಜ್ ಸಾವನ್ನು ಖಚಿತಪಡಿಸಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಸೂರಜ್ ಕೆಲಕಾಲ ಕೆಎಸ್ಇಬಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ನಿರ್ವಹಿಸಿದ್ದರು. ಈ ಮೊದಲು ಪೋಲೆಂಡ್ನ ಹಡಗು ನಿರ್ವಹಣಾ ಕಂಪನಿಯಲ್ಲಿ ಮೇಲ್ವಿಚಾರಕರಾಗಿದ್ದರು.
ಇತ್ತೀಚೆಗೆ ಕೇರಳದ ಪಾಲಕ್ಕಾಡ್ನ ಯುವಕ ಇಬ್ರಾಹಿಂ ಶೆರಿಫ್ ಪೋಲೆಂಡ್ನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಖಾಸಗಿ ಬ್ಯಾಂಕ್ನಲ್ಲಿ ಐಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಜನವರಿ 24 ರಿಂದ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ..
ಶೆರೀಫ್ ಅವರನ್ನು ಮನೆ ಮಾಲೀಕ ಎಮಿಲ್ ಅವರು ಕೊಂದಿದ್ದಾರೆ ಮತ್ತು ಅವರನ್ನು ಬಂಧಿಸಲಾಗಿದೆ ಎಂದು ಪೋಲಿಷ್ ಪೊಲೀಸರು ಭಾರತೀಯ ರಾಯಭಾರ ಕಚೇರಿಗೆ ತಿಳಿಸಿದ್ದಾರೆ. ಆದಾಗ್ಯೂ ಶೆರೀಫ್ ಅವರ ಸಂಬಂಧಿಕರು ಐಎಎನ್ಎಸ್ಗೆ ತಿಳಿಸಿದ್ದಾರೆ, ಅವರ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.