ಅಸ್ಸಾಂನಲ್ಲಿ ಮತ್ತೊಮ್ಮೆ ಬೃಹತ್‌ ಒತ್ತುವರಿ ತೆರವು ಕಾರ್ಯಾಚರಣೆ: ಅಡ್ಡಬಂದ ಪ್ರತಿಪಕ್ಷ ನಾಯಕ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸುಮಾರು 400 ಎಕರೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಒಂದು ವಾರದ ನಂತರ, ಬರ್ಪೇಟಾ ಜಿಲ್ಲೆಯಲ್ಲಿಯೂ ಇದೇ ರೀತಿಯ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ವೇಳೆ ಒತ್ತುವರಿದಾರರ ಬೆಂಬಲಕ್ಕೆ ಬಂದ ಪ್ರತಿಪಕ್ಷದ ಶಾಸಕನನ್ನೂ ವಶಕ್ಕೆ ಪಡೆಯಲಾಯಿತು.
ಇಂದು ಬೆಳಗ್ಗೆ ಬರ್ಪೇಟಾದ ಕೆನರಾ ಸತ್ರದಲ್ಲಿ ಸುಮಾರು 400 ಬಿಘಾ ಸರ್ಕಾರಿ ಭೂಮಿಯನ್ನು ತೆರವುಗೊಳಿಸಲು ಆಗಮಿಸಿದ ಬುಲ್ಡೋಜರ್‌ಗಳು ಆಕ್ರಮಿತ ಭೂಮಿಯಲ್ಲಿ ಕಾರ್ಯಾಚರಣೆ ನಡೆಸಿದವು. ಮತ್ತು ಅಲ್ಲಿ ವಾಸಿಸುತ್ತಿದ್ದ ಸುಮಾರು 40 ಕುಟುಂಬಗಳನ್ನು ಹೊರಹಾಕಲಾಯಿತು. ಸಂತ್ರಸ್ತ ಕುಟುಂಬಗಳಿಗೆ ಸಾಕಷ್ಟು ಮುಂಚಿತವಾಗಿ ನೋಟಿಸ್ ಕಳುಹಿಸಿದ್ದೇವೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ಬಾಗ್ಬೋರ್ ಶಾಸಕ ಶೆರ್ಮನ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೈಷ್ಣವ ಸಂತ ಶ್ರೀಮಂತ ಶಂಕರದೇವರ ಜನ್ಮಸ್ಥಳವಾದ ನಾಗಾಂವ್‌ನ ಬಟದ್ರವಾ ಬಳಿಯ ನಾಲ್ಕು ಗ್ರಾಮಗಳನ್ನು ಅತಿಕ್ರಮಣದಿಂದ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ, ಅಸ್ಸಾಂನ ದರ್ರಾಂಗ್‌ನಲ್ಲಿ ಇದೇ ರೀತಿಯ ಹೊರಹಾಕುವ ಕಾರ್ಯಾಚರಣೆಯು ಹಿಂಸಾಚಾರಕ್ಕೆ ತಿರುಗಿತ್ತು, ಇದರ ಪರಿಣಾಮವಾಗಿ ಅಪ್ರಾಪ್ತ ಸೇರಿದಂತೆ ಇಬ್ಬರು ಸಾವನ್ನಪ್ಪಿದರು ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಡಿಸೆಂಬರ್ 21 ರಂದು ರಾಜ್ಯದಲ್ಲಿ ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ತೆರವುಗೊಳಿಸಲು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಪ್ರತಿಪಾದಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!