ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿ ಬಳಿಕ ಭಾರತ ನೀಡುತ್ತಿರುವ ಬ್ಯಾಕ್ ಟೂ ಬ್ಯಾಕ್ ಮಾಸ್ಟರ್ ಸ್ಟ್ರೋಕ್ ಗೆ ಪಾಕ್ ಅಕ್ಷರಶಃ ನಲುಗಿಹೋಗಿದೆ!
ಈ ನಡುವೆ ಪಾಕ್ ಪ್ರಜೆಗಳಿಗೆ ನೀಡಿದ್ದ ಎಲ್ಲಾ ವೀಸಾ ಕೂಡಾ ಹಿಂಪಡೆಯಲಾಗಿದ್ದು, ಎಲ್ಟಿವಿ ವೀಸಾ ಹೊರತುಪಡಿಸಿ ಮತ್ತೆಲ್ಲರಿಗೂ ಭಾರತದಿಂದ ಹೊರಹೋಗುವಂತೆ ಆದೇಶ ಹೊರಬಿದ್ದಿದ್ದು, ಇದರ ಬೆನ್ನಲ್ಲೇ ಕರ್ನಾಟಕದಲ್ಲಿರುವ ಪಾಕ್ ಪ್ರಜೆಗಳಿಗೂ ಪಹಲ್ಗಾಮ್ ಬಿಸಿ ಜೋರಾಗಿಯೇ ತಟ್ಟಿದೆ.
ಮಂಗಳೂರಿನಲ್ಲಿ ಇಬ್ಬರು!
ವೀಸಾ ರದ್ದು ಆಗಲಿರುವ ಬೆನ್ನಲ್ಲಿಯೇ ಮಂಗಳೂರಿನಲ್ಲಿರುವ ಇಬ್ಬರು ಪಾಕ್ ಯುವತಿಯರಿಗೆ ಅತಂಕ ಶುರುವಾಗಿದೆ. ಮಂಗಳೂರಿನ ಇಬ್ಬರು ಯುವಕರನ್ನು ಪಾಕ್ ಯುವತಿಯರು ವಿವಾಹವಾಗಿದ್ದರು. ವಿವಾಹ ಸಂಬಂಧದ ಮೂಲಕ ಭಾರತಕ್ಕೆ ಬಂದಿರುವ ಯುವತಿಯರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.
ಇವರು ಇಂಟೇರಿಮ್ ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ. ಇದೀಗ FRRO ಕಚೇರಿಯಿಂದ ನಿರ್ದೇಶನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಕಾಯುತ್ತಿದ್ದಾರೆ.
ತುಮಕೂರಲ್ಲಿ ಮೂವರು!
ತುಮಕೂರು ಜಿಲ್ಲೆಯಲ್ಲಿ ಮೂವರು ಪಾಕ್ ಪ್ರಜೆಗಳು ವಾಸವಾಗಿದ್ದಾರೆ. ಎಲ್ಲರೂ ಮಹಿಳೆಯರಾಗಿದ್ದಾರೆ. ಓರ್ವ ಮಹಿಳೆ 1962 ರಲ್ಲಿ ಮದುವೆಯಾಗಿ ಇಲ್ಲಿಗೆ ಬಂದಿದ್ದರು. ಆ ಮಹಿಳೆ ಭಾರತದ ಪ್ರಜೆ ಎಂದು ಕೋರ್ಟ್ ಘೋಷಣೆ ಮಾಡಿದೆ. ಆದರೆ, ಭಾರತ ಸರ್ಕಾರ ಈವರೆಗೂ ಆಕೆಗೆ ಪೌರತ್ವ ನೀಡಿಲ್ಲ.
ಇನ್ನುಳಿದ ಇಬ್ಬರು ಮಹಿಳೆಯರು ಕಳೆದ 10 ವರ್ಷದ ಹಿಂದೆ ಮದುವೆಯಾಗಿ ಬಂದವರು. ಇಬ್ಬರೂ ದೀರ್ಘ ಅವಧಿಯ ವೀಸಾ ಪಡೆದು ಇಲ್ಲಿ ವಾಸವಿದ್ದಾರೆ.
ಮೈಸೂರಲ್ಲಿ ಎಂಟು ಮಂದಿ?
ಮೈಸೂರು ನಗರದಲ್ಲಿ ಅಧಿಕೃತವಾಗು 8 ಜನರು ವಾಸವಾಗಿರುವ ಬಗ್ಗೆ ಮಾಹಿತಿ ಇದೆ. 5 ಜನ ವಯಸ್ಕರರು ಮತ್ತು ಮೂವರು ಮಕ್ಕಳು ವಾಸವಾಗಿದ್ದು, ಪಾಕ್ ಪ್ರಜೆಗಳ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಹಾಗೂ ಜಿಲ್ಲಾಡಳಿತ ಕಲೆಹಾಕಿದೆ.
ಭಟ್ಕಳದಲ್ಲಿ ಹತ್ತು ಮಂದಿ!
ಭಟ್ಕಳ ಮೂಲದ ವ್ಯಕ್ತಿಗಳನ್ನು ವಿವಾಹವಾಗಿ ಭಟ್ಕಳದಲ್ಲೇ ನೆಲೆಸಿರುವ 10 ಮಂದಿ ಪಾಕಿಸ್ತಾನಿ ಮಹಿಳೆಯರು ಹಾಗೂ ಅವರ ನಾಲ್ವರು ಮಕ್ಕಳು ದೀರ್ಘಾವಧಿ ವಿಸಾ ಪಡೆದು ಎರಡು ವರ್ಷಕ್ಕೊಮ್ಮೆ ನವೀಕರಿಸಿಕೊಳ್ಳುತ್ತಿದ್ದಾರೆ. ಇವರು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಭಾರತೀಯ ಪೌರತ್ವ ಅವರಿಗೆ ಸಿಕ್ಕಿಲ್ಲ. ಮಾತ್ರವಲ್ಲ, ದೀರ್ಘಾವಧಿ ವೀಸಾ ಇರುವುದರಿಂದ ಭಟ್ಕಳದಲ್ಲೇ ಇವರು ನೆಲೆಸಿದ್ದಾರೆ.
ರಾಜ್ಯದಲ್ಲಿ ಇನ್ನೂ 50 ಮಂದಿ?
ಇಷ್ಟು ಮಾತ್ರವಲ್ಲ ಕರ್ನಾಟಕದಾದ್ಯಂತ ಸುಮಾರು 50 ಜನ ಪಾಕ್ ಪ್ರಜೆಗಳು ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.