ಹೊಸ ದಿಗಂತ ವರದಿ, ಕಲಬುರಗಿ:
ದೇಶದ ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಯೋ,ಅದೇ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಹೇಳಿದರು.
ಅವರು ನಗರದ ಸದಾ೯ರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಉತ್ತರ ಪ್ರದೇಶದ ಫಲಿತಾಂಶದ ಬೆನ್ನಲ್ಲೇ ವಿಜಯೋತ್ಸವ ಆಚರಣೆ ಮಾಡಿ ಮಾತನಾಡಿ, ಕೇಂದ್ರ ಸರಕಾರ ಹಾಗೂ ಆಯಾ ರಾಜ್ಯ ಬಿಜೆಪಿ ಸರಕಾರವು ನೀಡಿದ ಅಭಿವೃದ್ಧಿ ಪರವಾದ ಆಡಳಿತದಿಂದ ಯುಪಿ,ನಲ್ಲಿ 2ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.
ಕೇಂದ್ರದಲ್ಲಿ 2ನೆ ಬಾರಿಯ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಜನಪರ ಯೋಜನೆಗಳಿಗೆ ಉತ್ತರ ಪ್ರದೇಶ,ಗೋವಾ,ಉತ್ತರಾಖಂಡ್ ಮತ್ತು ಮಣಿಪುರನಲ್ಲಿ ಜನರು ಸಾತ್ ನೀಡಿದ್ದಾರೆ. ಅದೇ ರೀತಿ ಕಳೆದ 5 ವಷ೯ದಲ್ಲಿ ಗುಂಡಾ ಸರಕಾರವನ್ನು ಕಿತ್ತೋಗೆದು,ಒಳ್ಳೆಯ ಆಡಳಿತ ನೀಡಿದ ಪರಿಣಾಮ,2ನೇ ಬಾರಿಗೆ ಯೋಗಿ ಆದಿತ್ಯನಾಥ ಅವರು ಸರಕಾರ ರಚನೆ ಮಾಡಲಿದ್ದಾರೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಸೈಕಲ್, ಆನೆ ಸೇರಿದಂತೆ ವಿವಿಧ ಪ್ರಾದೇಶಿಕ ಪಕ್ಷಗಳು ನರೇಂದ್ರ ಮೋದಿ ಹಾಗೂ ಯೋಗಿ ಅವರ ಆಡಳಿತ ವೈಖರಿ ನೋಡಿ ಮುದುರಿಕೊಂಡು ಹೋಗಿವೆ ಎಂದ ಅವರು, ಕನಾ೯ಟಕ ರಾಜ್ಯದಲ್ಲೂ ಸಹ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗಿ ಹೋಗಲಿದೆ ಎಂದರು.
ಈ ಸಂದರ್ಭದಲ್ಲಿ ದಯಾಘನ ಧಾರಾವಾಡಕರ್,ಪ್ರಧಾನ ಕಾರ್ಯದರ್ಶಿ ಮಹಾದೇವ ಬೆಳಮಗಿ, ಲಿಂಗರಾಜು ಬಿರಾದಾರ, ವಿಜಯಲಕ್ಷ್ಮಿ ಗೊಬ್ಬುರಕರ,ದಿವ್ಯ ಹಾಗರಗಿ,ಮಲ್ಲಿಕಾರ್ಜುನ ಓಕಳಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.