ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಗಾಂಧಿ ಕುಟುಂಬಕ್ಕೆ ಕ್ಷಮೆ ಕೇಳಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳನ್ನು 31 ವರ್ಷಗಳ ನಂತರ ಬಿಡುಗಡೆ ಮಡಲಾಗಿತ್ತು. ಈ ವೇಳೆ ಮಾತನಾಡಿದ ನಳಿನಿ ಶ್ರೀಹರನ್, ನಾನು ಸ್ಫೋಟದಲ್ಲಿ ಸಾವನ್ನಪ್ಪಿದವರ ಬಗ್ಗೆ ತುಂಬಾ ವಿಷಾದವಿದೆ. ನಾವು ಘಟನೆಯ ಬಗ್ಗೆ ಯೋಚಿಸುತ್ತಾ ಹಲವು ವರ್ಷಗಳನ್ನು ಕಳೆದಿದ್ದೇವೆ. ಆ ಕುಟುಂಬದವರ ಬಳಿ ಕ್ಷಮೆಯಾಚಿಸುತ್ತೇನೆ ಎಂದರು.
ಸ್ಫೋಟದಲ್ಲಿ ಅನೇಕರು ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಅವರೆಲ್ಲರೂ ಆ ದುರಂತದಿಂದ ಯಾವುದೇ ಸಮಯದಲ್ಲಾದರೂ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.
ಮಾರ್ಚ್ 19, 2008 ರಂದು ವೆಲ್ಲೂರಿನ ಮಹಿಳಾ ವಿಶೇಷ ಕಾರಾಗೃಹದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನನ್ನನ್ನು ಭೇಟಿಯಾದಾಗ ನನಗೆ ಅವರ ಮೇಲೆ ಪ್ರೀತ, ಗೌರವ ಶುರುವಾಗಿತ್ತು. ನಾನು ಗಾಂಧಿ ಕುಟುಂಬವನ್ನು ಪ್ರೀತಿಸುತ್ತೇನೆ. ಅವರ ಕುಟುಂಬದ ಪ್ರತಿಯೊಬ್ಬರಿಗಾಗಿ ಪ್ರತಿದಿನ ಪ್ರಾರ್ಥಿಸುತ್ತಿದ್ದೆ. ಅವರಿಗೆ ನಾನು ಶುಭ ಹಾರೈಸುತ್ತೇನೆಂದು ಹೇಳಿದ್ದಾರೆ.
ನನಗೆ ಈಗಾಗಲೇ ಸಾಕಷ್ಟು ಪಶ್ಚಾತ್ತಾಪವಾಗಿದೆ. ಮಾಡಿದ ತಪ್ಪಿಗೆ ದೊಡ್ಡ ಬೆಲೆಯನ್ನೇ ಕಟ್ಟಿದ್ದೇನೆ. ಜೈಲಿನಲ್ಲಿದ್ದ ದಿನಗಳು ನನ್ನ ಜೀವನದ ಉತ್ತಮ ದಿನಗಳಾಗಿವೆ. ನನ್ನ ಪತಿ ಮತ್ತು ಮಗಳೊಂದಿಗೆ ಹೊಸ ಬದುಕು ಆರಂಭಿಸುತ್ತೇನೆ.30 ವರ್ಷಗಳಿಂದ ನಮ್ಮನ್ನು ಬೆಂಬಲಿಸಿದ ತಮಿಳರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ನಳಿನಿ ಹೇಳಿದ್ದಾರೆ.
ಜೀವನದ 31 ವರ್ಷಗಳನ್ನು ಸುಧೀರ್ಘವಾಗಿ ಜೈಲಿನಲ್ಲಿ ಕಳೆದಿದ್ದೇವೆ. ಆ ಕರಾಳ ದಿನಗಳನ್ನು ಹಿಂತಿರುಗಿ ನೋಡುವುದರಲ್ಲಿ ಅರ್ಥವಿಲ್ಲ. ಇದೀಗ ಜೀವನದ ಮುಂದಿನ ದಿನ ನೋಡಲು ಬಯಸುತ್ತಿದ್ದೇವೆ. ಸಾರ್ವಜನಿಕ ಜೀವನ ಪ್ರವೇಶಿಸುವುದಿಲ್ಲ. ನಮಗೆ ಬೆಂಬಲ ನೀಡಿದ ಸರ್ಕಾರ ಹಾಗೂ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದ್ದಾರೆ.