ಹೊಸದಿಗಂತ ವರದಿ,ಕೊಡಗು:
ಯುನೈಟೆಡ್ ಕೊಡವ ಆರ್ಗನೈಝೇಷನ್ (ಯುಕೊ) ಸಂಘಟನೆಯ ನಿಯೋಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ಕೊಡವ ಜನಾಂಗವನ್ನು ವಿಶೇಷವಾಗಿ ಆದ್ಯತೆಯೊಂದಿಗೆ ಪರಿಗಣಿಸಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಮನವಿ ಸಲ್ಲಿಸಿದೆ.
ಯುಕೊ ಅಧ್ಯಕ್ಷ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ, ಶಾಸಕರ ಭವನದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಒಂದು ಸಾಗರ ಇದ್ದಂತೆ, ಇದುವರೆಗೆ ಕೊಡವರಿಗೆ ಏನೂ ಆಗಿಲ್ಲ. ಕನಿಷ್ಟ ಒಂದು ಸದಸ್ಯ ಸ್ಥಾನವೂ ಕೊಡವರಿಗೆ ಲಭಿಸಿಲ್ಲ. ಹೀಗಿರುವಾಗ ಕೊಡವರ ಅಭಿವೃದ್ಧಿ ಅಸಾಧ್ಯ ಎಂದು ಮನವರಿಕೆ ಮಾಡಿತು.
ಬಜೆಟ್ನ ಘೋಷಿತ ಅನುದಾನವನ್ನು ಕೊಡವ ಅಭಿವೃದ್ಧಿ ನಿಗಮದ ಮೂಲಕವೇ ಹಂಚಲು ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು. ಕೊಡವರು ಭೌಗೋಳಿಕವಾಗಿಯೂ ಜನಸಂಖ್ಯೆಯಲ್ಲಿಯೂ, ಸಂಸ್ಕೃತಿ ಮತ್ತು ಪರಂಪರೆಯ ನಿಟ್ಟಿನಲ್ಲಿಯೂ ವಿಭಿನ್ನವಾಗಿ ಗುರುತಿಸಿಕೊಂಡಿರುವಾಗ, ಬೇರೆ ಸಾಮಾನ್ಯ ಮಾನದಂಡಗಳು ಕೊಡವ ಅಭಿವೃದ್ಧಿಗೆ ಪೂರಕವಾಗುವುದಿಲ್ಲ. ಕೇವಲ ಒಂದು ವರ್ಷದ ಅನುದಾನದಿಂದ ಕೊಡವ ಜನಾಂಗದ ಸಮಗ್ರ ಅಭಿವೃದ್ಧಿ ಅಸಾಧ್ಯವಾಗಿದ್ದು, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ ಎಂದು ಸಚಿವರಿಗೆ ಮನವರಿಕೆ ಮಾಡಲಾಯಿತು.
ಮುಖ್ಯಮಂತ್ರಿಗಳೊಂದಿಗೆ ಚರ್ಚೆ: ಮನವಿ ಸ್ವೀಕರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೊಡವರ ಬೇಡಿಕೆಯನ್ನು ಆದ್ಯತೆಯೊಂದಿಗೆ ಪರಿಗಣಿಸಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಕೊಡವರಿಗೆ ನಿಗಮದ ಅನಿವಾರ್ಯತೆಯನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ಯುಕೋ ನಿಯೋಗಕ್ಕೆ ಭರವಸೆ ನೀಡಿದರು.