ಹೊಸದಿಗಂತ ವರದಿ,ಸೋಮವಾರಪೇಟೆ:
ಮಠಾಧೀಶರಿಲ್ಲದೆ ಕಡೆಗಣಿಲ್ಪಟ್ಟಿರುವ ಪಟ್ಟಣದ ವಿರಕ್ತ ಮಠಕ್ಕೆ ವೀರಶೈವ ಸಮಾಜದಿಂದ ಸ್ವಾಮೀಜಿ ನೇಮಿಸಲು ನಿರ್ಧಾರಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ಸ್ವಾಮೀಜಿ ಇಲ್ಲದ, ಮಠದ ಕಟ್ಟಡ ಜೀರ್ಣಾವಸ್ಥೆಗೆ ತಲುಪಿರುವ ಹಿನ್ನಲೆಯಲ್ಲಿ ಸೋಮವಾರಪೇಟೆ ವೀರಶೈವ ಸಮಾಜದ ಯಜಮಾನ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಈನಿರ್ಧಾರ ಕೈಗೊಳ್ಳಲಾಗಿದೆ..
ತಮ್ಮ ಶಾಖಾ ಮಠ ಎಂದುಕೊಳ್ಳುವ ಚಿತ್ರದುರ್ಗ ಮಠ ಈ ಬಗ್ಗೆ ಗಮನ ಹರಿಸದೆ ಸಂಪೂರ್ಣ ನಿರ್ಲಕ್ಷಿದೆ. .ಹಿಂದಿನ ಸ್ವಾಮೀಜಿ ಲಿಂಗೈಕ್ಯರಾಗಿ ಮೂರು ವರ್ಷ ಕಳೆದರೂ ಈವರೆಗೆ ಸ್ವಾಮೀಜಿ ನೇಮಕ ಮಾಡಲಿಲ್ಲ. ಮಠದಲ್ಲಿ ಜನರಿಲ್ಲದೆ ಕಟ್ಟಡದ ಕೆಲವು ಭಾಗ ಶಿಥಿಲಗೊಂಡು ಬಿದ್ದುಹೋಗುತ್ತಿವೆ ಆದರೂ ದುರಸ್ತಿ ಮಾಡುತ್ತಿಲ್ಲ. ಮಠಕ್ಕೆ ಸೇರಿದ 30ಎಕರೆ ಜಮೀನು ಪಾಳುಬಿದ್ದಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಗೊಂಡಿತು.
ಸ್ವಾಮೀಜಿ ನೇಮಕಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮಠದ ಈಗಿನ ಉಸ್ತುವಾರಿ ಬಸವಪ್ರಭು ಸ್ವಾಮೀಜಿಯವರ ಗಮನ ಸೆಳೆದು ತಿಂಗಳಾಗುತ್ತಾ ಬಂದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಸಮಾಜ ಬಾಂಧವರು ಆಕ್ಷೇಪಿಸಿದರು.
ಇಂದು ಹಲವು ಮಠಗಳು ಇಲ್ಲದಾಗಿದೆ. ಅಂತಹ ಸಾಲಿಗೆ ಸೋಮವಾರಪೇಟೆ ವಿರಕ್ತ ಮಠ ಸೇರುವುದು ಬೇಡ. ಆದ್ದರಿಂದ ಸಮಾಜದಿಂದಲೇ ಸ್ವಾಮೀಜಿ ನೇಮಕ ಮಾಡಿ, ಆಸ್ತಿಪಾಸ್ತಿಯ ರಕ್ಷಣೆ ಆಗಬೇಕು ಎಂದು ಒಂದು ಸಮಿತಿಯನ್ನು ರಚಿಸಲಾಯಿತು.
ವಿರಕ್ತ ಮಠಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಚಟುವಟಿಕೆಗಳು ನಡೆಯಬೇಕಾದರೂ ವೀರಶೈವ ಸಮಾಜ ಹಾಗೂ ಉಸ್ತುವಾರಿ ಸಮಿತಿಯ ಗಮನಕ್ಕೆ ತಂದು ಮಾಡಬೇಕೆಂದು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಮುದ್ದಿಕಟ್ಟೆ ಮಠದ ಶ್ರೀ.ಅಭಿನವ ಸಿದ್ದಲಿಂಗ ಸ್ವಾಮೀಜಿ, ಮನೆ ಹಳ್ಳಿ ಮಠದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ಸಭೆಯ ಸಾನಿಧ್ಯ ವಹಿಸಿದ್ದರು. ವೀರಶೈವ ಸಮಾಜದ ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್ ಉಪಸ್ಥಿತರಿದ್ದರು.