ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾ ಸರಕಾರದ ಬಂಡಾಯ ಶಾಸಕರ ವಿರುದ್ಧ ದಿನೇ ದಿನೇ ಆಕ್ರೋಶಭರಿತ ಎಚ್ಚರಿಕೆ ನೀಡುತ್ತಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಈ ನೋಟಿಸ್ಗೆ ಸಂಜಯ್ ರಾವತ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ‘ನನ್ನನ್ನು ಅರೆಸ್ಟ್ ಮಾಡಿ’ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಜಾರಿ ನಿರ್ದೇಶನಾಲಯ ನನಗೆ ಸಮನ್ಸ್ ನೀಡಿದೆ ಎಂದು ನನಗೆ ತಿಳಿಯಿತು. ಮಹಾರಾಷ್ಟ್ರದಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ನಾವು ಬಾಳಾಸಾಹೇಬ್ ಅವರ ಶಿವಸೈನಿಕರು ದೊಡ್ಡ ಯುದ್ಧದಲ್ಲಿ ಹೋರಾಟ ಮಾಡುತ್ತಿದ್ದೇವೆ. ಇದು ನನ್ನನ್ನು ತಡೆಯಲು ಮಾಡಿರುವ ಹುನ್ನಾರ. ನೀವು ನನ್ನ ಶಿರಚ್ಛೇದ ಮಾಡಿದರೂ ಕೂಡ ನಾನು ಗುವಾಹಟಿಗೆ ಹೋಗುವುದಿಲ್ಲ. ನನನ್ನು ಅರೆಸ್ಟ್ ಮಾಡಿ. ಜೈ ಹಿಂದ್’ ಎಂದು ಅವರು ಹೇಳಿದ್ದಾರೆ.
ಪ್ರಕರಣ ಏನು?
1034 ಕೋಟಿ ರೂ. ಮೌಲ್ಯದ ಪತ್ರ ಚಾವಲ್ ಭೂಹಗರಣ ಇದಾಗಿದ್ದು, ಪ್ರಕರಣ ಸಂಬಂಧ ರಾವತ್ ಅವರಿಗೆ ಸೇರಿದ್ದ ಬಹುಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಇದೇ ವರ್ಷ ಏಪ್ರಿಲ್ನಲ್ಲಿ ಮುಟ್ಟುಗೋಲು ಹಾಕಿತ್ತು. ಇದೀಗ ಇದೇ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿ ಎಂದು ಸಂಜಯ್ ರಾವತ್ ಅವರಿಗೆ ಇಡಿಯಿಂದ ನೋಟಿಸ್ ಬಂದಿದೆ.