ಹೊಸದಿಗಂತ ವರದಿ, ಮೈಸೂರು:
ಬಸ್ಗಾಗಿ ಕಾಯುತ್ತಿದ್ದ ಮಹಿಳೆಗೆ ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಹತ್ತಿಸಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಬೆದರಿಸಿ ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನoಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದ ನಿವಾಸಿಗಳಾದ ವೆಂಕಟೇಶ್ ಹಾಗೂ ಮಂಜು ಬಂಧಿತರು.
ಇವರಿoದ ಮಹಿಳೆಯಿಂದ ಸುಲಿಗೆ ಮಾಡಿದ್ದ 25 ಗ್ರಾಂ ತೂಕದ ಚಿನ್ನದ ಸರ,ಪರ್ಸ್ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಹೆಡಿಯಾಲ ಗ್ರಾಮದ ಚಿಕ್ಕಮ್ಮ ಎಂಬುವರು ಚಿಕಿತ್ಸೆಗಾಗಿ ಸರಗೂರು ಗ್ರಾಮಕ್ಕೆ ತೆರಳಿದ್ದರು.ವಾಪಸ್ ಹೆಡಿಯಾಲಕ್ಕೆ ತೆರಳಲು ಬಸ್ ಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದರು.ಇದೇ ವೇಳೆ ಅಲ್ಲಿಗೆ ಬೈಕ್ ನಲ್ಲಿ ಬಂದ ಹೆಡಿಯಾಲ ಗ್ರಾಮದ ವೆಂಕಟೇಶ್ ಹಾಗೂ ಮಂಜು ಮಹಿಳೆ ಚಿಕ್ಕಮ್ಮಳಿಗೆ ಡ್ರಾಪ್ ಕೊಡುವುದಾಗಿ ಪುಸಲಾಯಿಸಿ, ಬೈಕ್ ಹತ್ತಿಸಿಕೊಂಡಿದ್ದಾರೆ. ಆದರೆ ಕಪುö್ಪಸೋಗೆ ಗ್ರಾಮದ ಕಡೆ ಹೋಗುತ್ತಿದ್ದಂತೆ, ಚಿಕ್ಕಮ್ಮ ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಬೆದರಿಸಿದ ವೆಂಕಟೇಶ್ ಹಾಗೂ ಮಂಜು ಆಕೆಯ ಬಳಿಯಿದ್ದ ಪರ್ಸ್, ಮೊಬೈಲ್, ಚಿನ್ನದ ಸರವನ್ನು ಕಿತ್ತುಕೊಂಡು, ಈ ಬಗ್ಗೆ ಗ್ರಾಮದಲ್ಲಿ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಗ್ರಾಮಕ್ಕೆ ಬಂದ ಚಿಕ್ಕಮ್ಮ, ಸುಧಾರಿಸಿಕೊಂಡು, ಬಳಿಕ ಹುಲ್ಲಹಳ್ಳಿ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಕಾರ್ಯಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.