ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಬಿಜೆಪಿಯ ಸದಸ್ಯ ಅಲ್ಲ. ಆಗಾಗ ಹೊರಗೆ – ಒಳಗೆ ಹೋಗಿ ಬರುತ್ತಿದ್ದರು. ವಿಶ್ವಾಸಾರ್ಹ ನಡವಳಿಕೆ ಅವರಲ್ಲಿ ಇರಲಿಲ್ಲ. ಬಿಜೆಪಿಯ ಸದಸ್ಯರಾಗಿ ಕೆಲಸ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಶುಕ್ರವಾರ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಅರುಣ್ ಪುತ್ತಿಲ ಪರಿವಾರ ಸಂಘಟನೆಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಪುತ್ತೂರಿನ ಪರಿಸ್ಥಿತಿ ವಿಚಿತ್ರವಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರಿದ ಅಶೋಕ್ಷ ರೈ, ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅರುಣ್ ಪುತ್ತಿಲ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಹಾಗು ಕಾಂಗ್ರೆಸ್ ಗೆ ನೇರಾ ಹಣಾಹಣಿ ನಡೆಯಲಿದ್ದು, ಬಿಜೆಪಿಯ ಭದ್ರಕೋಟೆಯಾದ ಪುತ್ತೂರಿನಲ್ಲಿ ಬಿಜೆಪಿ ವಿಜಯಿಶಾಲಿಯಾಗಲಿದೆ ಎಂದರು.
ಮಹಿಳಾ ಸಶಕ್ತಿಯ ಕಾರಣಕ್ಕೆ ದ.ಕ ಜಿಲ್ಲೆಯಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಅವರಿಗೆ ಗೆಲ್ಲುವ ಕ್ಷೇತ್ರಗಳಲ್ಲಿ ಟಿಕೆಟ್ ನೀಡುವುದು ಉತ್ತಮವೇ, ಸೋಲುವ ಕ್ಷೇತ್ರದಲ್ಲಿ ಟಿಕೆಟ್ ನೀಡುವುದು ಉತ್ತಮವೇ ಎಂದು ಪ್ರಶ್ನಿಸಿದ ಅವರು, ಸುಳ್ಯದಲ್ಲಿ ಆಶ್ರಯದಾತ ಮನೆಯಲ್ಲಿ ವಾಸಿಸುವ ಭಾಗೀರಥಿ ಮುಳೇರಿಯಾ ಅವರಿಗೆ ಟಿಕೆಟ್ ನೀಡಿದ್ದೇವೆ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದವರು ಹೇಳಿದರು.
ಕಾರ್ಕಳ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಪ್ರಮೋದ್ ಮುತಾಲಿಕ್ ಅವರು, ಸಾಧ್ಯವಾದರೇ ಹಿಂದುತ್ವದ ವಿರೋಧಿಯಾಗಿರುವ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಿತ್ತು. ತಮ್ಮ ಅಹಂಕಾರ, ಸ್ವಾರ್ಥಕ್ಕಾಗಿ ಬಿಜೆಪಿ ಪಕ್ಷ ಗಟ್ಟಿ ನೆಲೆ ಕಂಡಿರುವ ಕ್ಷೇತ್ರದಲ್ಲಿ ಹಿಂದುತ್ವ ಎಂಬ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.