ಹೊಸದಿಗಂತ ವರದಿ ರಾಮನಗರ:
ಸಚಿವ ಮಾಧುಸ್ವಾಮಿ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಅವರದ್ದೇ ಅಲ್ಲ, ಇದೆಲ್ಲ ವಿರೋಧ ಪಕ್ಷಗಳ ಕುತಂತ್ರ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಕಿಡಿ ಕಾರಿದ್ರು. ರಾಮನಗರದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ನಮ್ಮ ಸರ್ಕಾರ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಮಾಧುಸ್ವಾಮಿ ಆ ರೀತಿ ಹೇಳಿರಲು ಸಾಧ್ಯವೇ ಇಲ್ಲ. ಇದೆಲ್ಲ ಶಕುನಿಗಳ ಕೆಲಸ ಎಂದರು.
ಟಿಪ್ಪು ಹೋರಾಟಗಾರ ಅಲ್ಲ:
ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ. ತನ್ನ ಅಸ್ತಿತ್ವ ಹಾಗೂ ಸಾಮ್ರಾಜ್ಯ ಉಳಿಸಿಕೊಳ್ಳಲು ಹೋರಾಡಿದ ಒಬ್ಬ ವೀರ ಯೋಧ ಅಷ್ಟೇ ಎಂದು ಅಶ್ವತ್ಥನಾರಾಯಣ ಹೇಳಿದರು. ಟಿಪ್ಪುವಿನ ನರಹತ್ಯೆ ನಮಗೆಲ್ಲರಿಗೂ ತಿಳಿದೇ ಇದೆ. ತನ್ನನ್ನು ಬೆಳೆಸಿದ ಮೈಸೂರು ಅರಸರಿಗೇ ಆತ ದ್ರೋಹ ಬಗೆದಿದ್ದರು. ಮಡಿಕೇರಿ, ಭಟ್ಕಳ, ಕೇರಳ, ಮೇಲುಕೋಟೆ ಜನರು ಎಂದಿಗೂ ಟಿಪ್ಪುವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ಸರ್ಕಾರಿ ಜಾಹೀರಾತಿನಿಂದ ನೆಹರು ಭಾವಚಿತ್ರ ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ನೆಹರು ಹೆಸರು ಕೈಬಿಟ್ಟ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಮುಖ್ಯಮಂತ್ರಿ ಸಹ ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ’ ಎಂದರು.