ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು ಪ್ರವಾಹದಿಂದಾಗಿ ಚಲಿಸಲಾಗದೇ ಮಾರ್ಗ ಮಧ್ಯದಲ್ಲೇ ಸಿಲುಕಿಕೊಂಡಿದ್ದ ರೈಲಿನಲ್ಲಿದ್ದ 119 ಪ್ರಯಾಣಿಕರನ್ನು ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಿಸಲಾಗಿದೆ. ʼ
ಪ್ರವಾಹದಿಂದ ನೀರುತುಂಬಿಕೊಂಡು ಸಿಲ್ಚಾರ್-ಗುವಾಹಟಿ ಎಕ್ಸ್ ಪ್ರೆಸ್ ರೈಲು ಕ್ಯಾಚಾರ್ ಪ್ರದೇಶದಲ್ಲಿ ಸಿಲುಕಿಕೊಂಡಿತ್ತು. ಹಲವಾರು ಗಂಟೆಗಳ ಕಾಲ ಚಲಿಸಲಾಗದೇ ಅತಂತ್ರ ಸ್ಥಿತಿಯಲ್ಲಿದ್ದ ರೈಲಿನಲ್ಲಿದ್ದ ಪ್ರಯಾಣಿಕರನ್ನು ಜಿಲ್ಲಾಡಳಿತವು ಭಾರತೀಯ ವಾಯುಪಡೆಯ ಸಹಾಯದಿಂದ ರಕ್ಷಿಸಿದೆ.
ಹಠಾತ್ ಪ್ರವಾಹ ಮತ್ತು ಹಲವಾರು ಸ್ಥಳಗಳಲ್ಲಿ ಭಾರಿ ಭೂಕುಸಿತಗಳಿಂದ ಅಸ್ಸಾಂ ಧ್ವಂಸಗೊಂಡಿದೆ. ಪ್ರವಾಹದಿಂದ ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಸ್ತಬ್ಧವಾಗಿದೆ.ನ್ಯೂ ಕುಂಜಂಗ್, ಫಿಯಾಂಗ್ಪುಯಿ, ಮೌಲ್ಹೋಯ್, ನಮ್ಝುರಾಂಗ್, ಸೌತ್ ಬಾಗೇಟರ್, ಮಹಾದೇವ್ ತಿಲ್ಲಾ, ಕಲಿಬರಿ, ನಾರ್ತ್ ಬಾಗೇಟರ್, ಜಿಯಾನ್ ಮತ್ತು ಲೋಡಿ ಪಂಗ್ಮೌಲ್ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 80 ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ತಿಳಿಸಿದೆ.
ಪ್ರವಾಹದಿಂದಾಗಿ ರಾಜ್ಯದ ಏಳು ಜಿಲ್ಲೆಗಳು ಮುಳುಗಡೆಯಾಗಿದ್ದು ಸುಮಾರು 57,000 ಕ್ಕೂ ಹೆಚ್ಚಿನ ಮಂದಿ ಸಂಕಷ್ಟದಲ್ಲಿದ್ದಾರೆ, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಮೂಲಗಳು ವರದಿ ಮಾಡಿವೆ.