ಹೊಸದಿಗಂತ ವರದಿ, ವಿಜಯಪುರ:
ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ 10 ಆರೋಪಿಗಳಿಗೆ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಇಲ್ಲಿನ ವಿಜಯಕುಮಾರ ಮಲ್ಲಪ್ಪ ಡೋಣಿ, ಶಾಂತಕುಮಾರ ಮಲ್ಲಪ್ಪ ಡೋಣಿ, ಸಬನಗೌಡ ದೊಡ್ಡನಗೌಡ ಪಾಟೀಲ, ಉಮೇಶ ಮಂದಣ್ಣ ಗೌಡರ, ಕಲ್ಲಪ್ಪ ಬಸಲಿಂಗಪ್ಪ ಕಲ್ಬುರ್ಗಿ, ಸಂಗಮೇಶ ಅರ್ಜುನ ಬಿಲ್ಲೂರ, ಶಾಂತವೀರ ನಿಂಗೊಂಡ ಯರನಾಳ, ಸುರೇಶ ಅಣ್ಣಪ್ಪ ಪೂಜಾರಿ, ಮುದಕಪ್ಪ ದುಂಡಪ್ಪ ಹಾವಡಿ, ಸಂತೋಷ ಶಂಕರಗೌಡ ಪಾಟೀಲ ಶಿಕ್ಷೆಗೆ ಗುರಿಯಾಗಿದ್ದಾರೆ.
ನಗರದ ಮಧುವನ ಹೋಟೆಲ್ ಬಳಿಯ ವಿಠಲ ಶಾಂತಪ್ಪ ಬಿರಾದಾರ ಎಂಬುವವರ ಮನೆ ಮುಂದೆ 2014 ಮೇ 8 ರಂದು ಆರೋಪಿಗಳೆಲ್ಲರೂ ಸೇರಿ ತಂಟೆ ತಕರಾರು ಮಾಡಿದ್ದರು. ವಿಠಲನ ಮನೆಯ ತಡೆಗೋಡೆ ಕೆಡವಿದ್ದರು. ರಾಡ್ ಮತ್ತು ಕಲ್ಲು ಹಿಡಿದು ಮನೆಯ ಕೀಲಿ ಹಾಕಿ ಗಲಾಟೆ ಮಾಡಿ, ಕೊಲೆ ಮಾಡಲು ಯತ್ನಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸತೀಶ ಎಲ್.ಪಿ ಸಾಕ್ಷಾಧಾರಗಳು ರುಜುವಾತಾದ ಹಿನ್ನೆಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 2,37,500 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ವಿ.ಎಸ್. ಇಟಗಿ ವಾದ ಮಂಡಿಸಿದ್ದರು.