ಹೊಸದಿಗಂತ ವರದಿ,ವಿಜಯಪುರ:
ಹಾಡಹಗಲೇ ಚಿನ್ನಾಭರಣ ಅಂಗಡಿ ಮಾಲೀಕನ ಮನೆಯಲ್ಲಿ, ಆಂಧ್ರ ಮೂಲದ ನಾಲ್ಕೆದು ಮಹಿಳೆಯರ ತಂಡ ಚಿನ್ನಾಭರಣ ಕಳ್ಳತನಕ್ಕೆ ಯತ್ನಿಸಿದ್ದು, ಸಾರ್ವಜನಿಕರು ಮಹಿಳೆಯೊಬ್ಬಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಮಧ್ಯಾಹ್ನ ನಡೆದಿದೆ.
ಇಲ್ಲಿನ ಮಾರುತಿ ನಗರ ಬಡಾವಣೆಯ ಚಿನ್ನಾಭರಣ ಅಂಗಡಿಯ ಮಾಲೀಕ ರವಿ ಬಡಿಗೇರ ಎನ್ನುವವರು ಕೆಲಸದ ಮೇಲೆ ಹೊರಗೆ ಹೋಗಿದ್ದು, ಮನೆಯಲ್ಲಿ ಅವರ ಪತ್ನಿ ಅಡುಗೆ ಮಾಡಲು ನಿರತಳಾಗಿದ್ದ ವೇಳೆ, ಹೊರಗಿನ ಕೋಣೆಯಲ್ಲಿದ್ದ ಟ್ರೇಜರಿ ಸಪ್ಪಳ ಕೇಳಿ ಬಂದಿದೆ. ಆಗ ಸಂಶಯಗೊಂಡು ಹೊರಗೆ ಬಂದು ನೋಡಿದಾಗ ನಾಲ್ಕೆದು ಮಹಿಳೆಯರು ಕಳ್ಳತನ ಮಾಡುತ್ತಿರುವುದು ಗೊತ್ತಾಗಿದೆ. ಆಗ ಮನೆಯ ಒಡತಿ ಚಿರಾಡತೊಡಗಿದ್ದು, ಮಹಿಳೆಯರು ಆಕೆಯ ಮುಖಕ್ಕೆ ಯಾವುದೋ ಪುಡಿ ಎರಚಿದ್ದಕ್ಕೆ ಚೀರಾಟ ಬಂದ್ ಆಗಿದೆ. ಆದರೂ ಧೈರ್ಯದಿಂದ ಬಡಿಗೇರ ಅವರ ಪತ್ನಿ ಕುಡುಗೋಲು ಹಿಡಿದು ಬಂದಾಗ, ಚಿನ್ನದ ಆಭರಣ, ನಗದು ಹಣವನ್ನು ಅಲ್ಲೇ ಬಿಸಾಕಿ ಕಳ್ಳಿಯರು ಓಡಿ ಹೋಗಿದ್ದಾರೆ.
ಈ ಗದ್ದಲದಿಂದ ಸಾರ್ವಜನಿಕರು ಓಡಿ ಬಂದು ಮಹಿಳೆಯೊಬ್ಬಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಮಹಿಳೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.