ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಮಹಿಳಾ ಪೊಲೀಸ್ ಠಾಣೆ ಬಳಿ ಹಿಂದು ಸಂಘಟನೆಗಳ ಕಾರ್ಯಕರ್ತರಿಂದ ಶನಿವಾರ ಪ್ರತಿಭಟನೆ ನಡೆದಿದೆ.
ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಇದಕ್ಕಿಂತ ಮೇಲಿನ ಉದಾಹರಣೆ ಬೇಕಿಲ್ಲ. ಅನೇಕ ಬಾರಿ ಈ ರೀತಿಯ ಘಟನೆ ನಡೆದರೂ ಇಲಾಖೆ ಗಂಭೀರ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಆರೋಪಿಯನ್ನು ಬೆಳಗ್ಗೆ 8 ಗಂಟೆಯೊಳಗೆ ಬಂಧಿಸದಿದ್ದಲ್ಲಿ ವೈದ್ಯರು ತಮ್ಮ ಸೇವೆಯನ್ನು ಸ್ಥಗಿತ ಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ವೈದ್ಯರಿಗೆ ಬೆಂಬಲವನ್ನು ನೀಡೋಣ ಮತ್ತು ಠಾಣೆ ಮುಂದೆ ನಡೆಯುವ ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಪ್ರತಿಭಟನಾಕಾರರು ವಿನಂತಿಸಿದ್ದಾರೆ.
ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯರಿಗೆ ಹಲ್ಲೆಗೆ ಯತ್ನಸಿದ ಆರೋಪಿ ಸಮದ್ ನನ್ನು ಒಮ್ಮೆ ಪೊಲೀಸರು ವಶಕ್ಕೆ ಪಡೆದು ಬಿಟ್ಟು ಕಳುಹಿಸಿರುತ್ತಾರೆ. ರಾತ್ರಿ ಪುತ್ತೂರಿನ ವೈದ್ಯರ ಸಂಘದ ಸದಸ್ಯರ ಜೊತೆಗೆ ಹಿಂದು ಮುಖಂಡರು ಠಾಣೆಗೆ ತೆರಳಿ ಮಾತನಾಡಿದಾಗ ಬೆಳಗ್ಗೆ 8 ಗಂಟೆಯೊಳಗೆ ಬಂಧಿಸುತ್ತೇವೆ ಎಂಬ ಆಶ್ವಾಸನೆ ಕೊಟ್ಟಿದ್ದರು. ಆದರೆ, ಬೆಳಗ್ಗೆ 8 ಗಂಟೆಯಾದರೂ ಆರೋಪಿ ಸಮಾದ್ ಇನ್ನೂ ಪೊಲೀಸರಿಗೆ ಸಿಕ್ಕಿರುವುದಿಲ್ಲ. ಈಗ ಆರೋಪಿ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾನೆ ಎನ್ನುತ್ತಿದ್ದಾರೆ ಪೊಲೀಸರು. ಇಂತಹ ಘಟನೆಗಳನ್ನು ಹೀಗೆ ಬಿಟ್ಟರೆ ನಮ್ಮೂರು ಕಾಶ್ಮೀರ ಆಗೋದರಲ್ಲಿ ಸಂಶಯವಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.
ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಹಿಂದೂ ಸಂಘಟನೆಗಳ ಕಾರ್ಯಕರ್ತರು ಇಂದು ಪುತ್ತೂರಿನ ಮಹಿಳಾ ಠಾಣೆಯೆದುರು ಆಗಮಿಸಿ ಪೊಲೀಸರ ಕೈಯಲ್ಲಿದ್ದ ಆರೋಪಿಯನ್ನು ಬಿಡಲು ಯಾರಾ ಒತ್ತಡವಿತ್ತೆನ್ನುವ ಸತ್ಯ ಹೊರ ಬರಲಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.