ಹೊಸದಿಗಂತ ವರದಿ, ಕಲಬುರಗಿ:
ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ ಮಶಾಳ ಕೇದಾರ ಶ್ರೀಗಳ ಮೇಲೆ ತಡರಾತ್ರಿ ನಡೆದ ಹಲ್ಲೆಯ ಪ್ರಕರಣ ಖಂಡಿಸಿ, ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದ ವತಿಯಿಂದ ಆರೋಪಿಗಳನ್ನು ಬಂದಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಲಬುರಗಿಯ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿ ಈಶಾ ಪಂಥ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಹಿಂದು ಜಾಗೃತಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ, ನಿನ್ನೆ ಗುರುವಾರ ತಡರಾತ್ರಿ ಕೇದಾರ ಶ್ರೀಗಳ ಮೇಲೆ 3 ಜನ ದುಷ್ಕರ್ಮಿಗಳು ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಠದ ಕಿಟಕಿಯ ಗಾಜು ಒಡೆದಿದ್ದಾರೆ. ಶ್ರೀಗಳ ಸಮಯ ಪ್ರಜ್ಞೆಯಿಂದ ಬಾಗಿಲು ತೆಗೆಯದೇ ಇರುವದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಶೀಘ್ರವೇ ಬಂಧಿಸಿ, ಶಿಕ್ಷೆಗೆ ಒಳಪಡಿಸಿ, ಶ್ರೀಗಳಿಗೆ ಸೂಕ್ತ ಪೋಲಿಸ್ ಬಂದೋಬಸ್ತ್ ಒದಗಿಸಬೇಕೆಂದು ಹೇಳಿದರು.
ಭವಿಷ್ಯದ ದೃಷ್ಟಿಯಿಂದ ಶ್ರೀಗಳಿಗೆ ಒಬ್ಬ ಗನ್ ಮ್ಯಾನ್ ಒದಗಿಸಿ,ಅವರ ರಕ್ಷಣೆಗೆ ಪೋಲಿಸ್ ಇಲಾಖೆ ಮುಂದಾಗಬೇಕೆಂದು ಆಗ್ರಹಿಸಿದರು. ಇತ್ತಿಚೆಗೆ ಗೋ ಹತ್ಯೆ ಕಾಯ್ದೆ,ಲವ್ ಜಿಹಾದ್ ,ಮತಾಂತರ ಮಾಡುವದರ ಬಗ್ಗೆ ಹಿಂದೂ ಜಾಗೃತಿ ಸೇನೆಯ ಕಾಯ೯ಕ್ರಮದಲ್ಲಿ ಮಾತನಾಡಿದ್ದರು.ಹಾಗೂ ಹಿಂದೂ ಧರ್ಮದ ಪರವಾಗಿ ಧ್ವನಿ ಎತ್ತುವ ಮಠಾಧೀಶರಾದ ಶ್ರೀಗಳ ಜೀವಕ್ಕೆ ಹಾನಿ ಮಾಡಲು ಸಂಚು ಎಂಬುದು, ಈ ಘಟನೆಯಿಂದ ಸಾಬಿತಾಗುತ್ತದೆ. ಹೀಗಾಗಿ ಶ್ರೀಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ತಿಳಿಸಿದರು.
ಒಂದು ವೇಳೆ ಆರೋಪಿಗಳನ್ನು ಬಂದಿಸಿ, ಶಿಕ್ಷೆಗೆ ಒಳಪಡಿಸದೇ ಇದ್ದಲ್ಲಿ, ಎಲ್ಲಾ ಹಿಂದೂ ಪರ ಸಂಘಟನೆಗಳ ಹಾಗೂ ಮಠಾಧೀಶರು ಸೇರಿ ಕಲಬುರಗಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸುನೀಲ್ ಶಿರ್ಕೆ, ದಶರಥ ಇಂಗೋಳೆ, ರಾಜು ಕಮಲಾಪುರೆ, ಪ್ರಕಾಶ್ ವಾಗಮಾರೇ, ಗುರುಸ್ವಾಮಿ, ಪ್ರಶಾಂತ್ ಶಿರೂರು, ಪವನ ಕದಮ್ ಸೇರಿದಂತೆ ಪ್ರಮುಖರು ಇದ್ದರು.