ಹೊಸದಿಗಂತ ವರದಿ,ಮಡಿಕೇರಿ:
ಹಿಂದು ಧರ್ಮದ ವಿರುದ್ಧದ ಪುಸ್ತಕಗಳನ್ನು ಪ್ರಕಟಿಸಿ ಮಡಿಕೇರಿಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹಿಂದು ಸಂಘಟನೆಯ ಕಾರ್ಯಕರ್ತರು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ವೀರಾಜಪೇಟೆ ಶಿವಕೇರಿ ನಿವಾಸಿ ಹೆಚ್.ಬಿ.ನಿಶಾಂತ್ ಎಂಬಾತನೇ ಬಂಧಿತ ಆರೋಪಿ.
ಹಿಂದು ಧರ್ಮದ ದೇವರ ಅವಹೇಳನ ಮಾಡುವಂತಹ ಹಾಗೂ ಮತಾಂತರಕ್ಕೆ ಪ್ರೇರಣೆ ನೀಡುವ ಪುಸ್ತಕವನ್ನು ಬಲವಂತವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಹಿಂದು ಸಂಘಟನೆಯ ಕಾರ್ಯಕರ್ತರು ಆತನನ್ನು ವಿಚಾರಿಸಿ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಡಿಕೇರಿಯ ಟಿ.ವಿ ಕುಮಾರ್ ಅವರು ನೀಡಿದ ದೂರಿನ ಅನ್ವಯ ಮಡಿಕೇರಿ ನಗರ ಪೊಲೀಸರು
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದು, ಹಿಂದು ಧರ್ಮದ ವಿರುದ್ಧ ಪ್ರಕಟಿಸಲಾದ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ.