ಹೊಸದಿಗಂತ ವರದಿ, ಕುಶಾಲನಗರ:
ಆತ್ಮಹತ್ಯೆಗೆ ಯತ್ನಿಸಿ ಕಾವೇರಿ ನದಿಗೆ ಹಾರಿದ ವ್ಯಕ್ತಿ ಆಯಸ್ಸು ಗಟ್ಟಿ ಇದ್ದ ಕಾರಣ ಬದುಕಿ ಬಂದ ಘಟನೆ ನಡೆದಿದೆ.
ಮಾದಾಪಟ್ಟಣ ನಿವಾಸಿ ಕುಶಾಲನಗರದ ಸೇತುವೆ ಸಮೀಪ ಬಿಎಸ್ ಆರ್ ಇಂಜಿನಿಯರಿಂಗ್ ವರ್ಕ್ಸ್ ನ ಮಾಲಕ ಗಣೇಶ (42) ಎಂಬವರೇ ನದಿಗೆ ಹಾರಿದ ವ್ಯಕ್ತಿ.
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತಾನು ಚಾಲಿಸಿಕೊಂಡು ಬಂದ ದ್ವಿಚಕ್ರ ವಾಹನವನ್ನು ಸೇತುವೆ ಮೇಲೆ ನಿಲ್ಲಿಸಿ ನದಿಗೆ ಜಿಗಿದಿದ್ದಾರೆ.
ಬಹು ದೂರದವರೆಗೆ ತುಂಬಿದ ನದಿಯಲ್ಲಿ ಈಜುತ್ತಾ ಮುಳುಗುತ್ತಾ ಸಾಗಿ ಕಣ್ಮರೆಯಾಗಿದ್ದಾರೆ. ಇದನ್ನು ಕಂಡು ವಿಡಿಯೋ ಮಾಡುತ್ತಿದ್ದ ಕೆಲವರು ಇವರ ಗುರುತು ಪತ್ತೆಹಚ್ಚಿದ್ದಾರೆ.
ಕೂಡಲೇ ಸ್ಥಳೀಯರಾದ ಎಚ್.ಎಂ.ಚಂದ್ರು, ರಾಜು, ರಜಾಕ್ ಎಂಬವರು ತೆಪ್ಪ ಬಳಸಿ ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಸೇತುವೆಯಿಂದ ಅರ್ಧ ಕಿಮಿ ದೂರದಲ್ಲಿ ಬಿದಿರಿನ ರಂಬೆ ಸಹಾಯದಿಂದ ನಿಂತಿದ್ದ ಗಣೇಶ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ರಕ್ಷಿಸಿ ತೆಪ್ಪದಲ್ಲಿ ನದಿ ದಂಡೆಗೆ ಕರೆತರಲಾಯಿತು. ತೀವ್ರ ನಿತ್ರಾಣಗೊಂಡಿದ್ದ ಗಣೇಶರಿಗೆ ಪ್ರಥಮ ಚಿಕಿತ್ಸೆ ನೀಡಿ ಕೌನ್ಸಲಿಂಗ್ ಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಉತ್ತಮವಾಗಿ ಈಜಬಲ್ಲ ಗಣೇಶ್ ನದಿಗೆ ಹಾರಿದರೂ ಮುಳುಗಲು ಸಾಧ್ಯವಾಗದೆ ನಿತ್ರಾಣಗೊಂಡು ರೆಂಬೆಯ ಸಹಾಯ ಪಡೆದು ಬದುಕಿ ಬಂದಿರುವುದಾಗಿ ರಕ್ಷಣಾ ಕಾರ್ಯ ನಡೆಸಿದ ಎಚ್.ಎಂ.ಚಂದ್ರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.