ಹೊಸದಿಗಂತ ಡಿಜಿಟಲ್ ಡೆಸ್ಕ್
ಅಯೋಧ್ಯೆ: ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ರಾಮಲಲ್ಲಾನ ದರ್ಶನ ಪಡೆದ ಭಕ್ತರಿಗೆ ಇದೇ ಮೊದಲ ಸಲ ಅನ್ನ ಪ್ರಸಾದ ಲಭ್ಯವಾಗುತ್ತಿದೆ. ಕಣ್ತುಂಬ ರಾಮಲಲ್ಲಾನ ದರ್ಶನ ಮಾಡುವ ಭಕ್ತರು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದಾರೆ.
ಏ. 3ರಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಆವರಣದ ಹೊರಭಾಗದಲ್ಲಿ ವಿಶ್ವ ಹಿಂದು ಪರಿಷತ್ ಕಚೇರಿ ಗಣಪತಿ ನಿವಾಸದಲ್ಲಿ ಟ್ರಸ್ಟ್ ಸೀತಾ ರಸೋಯಿಯನ್ನು ಆಯೋಜಿಸಿದೆ. ಇದು ರಾಮ ಜನ್ಮಭೂಮಿಯಿಂದ ಕೇವಲ 100 ಮೀ. ದೂರದಲ್ಲಿದೆ. ಒಂದೇ ಬಾರಿಗೆ 300 ಭಕ್ತರು ಪ್ರಸಾದ ಸ್ವೀಕರಿಸುವ ವ್ಯವಸ್ಥೆಯಿದೆ. ಪ್ರಸಾದ ಸ್ವೀಕರಿಸಲು ಸಂಖ್ಯಾ ಮಿತಿಯಿಲ್ಲ, ಯಾರು ಬಂದರೂ ಪ್ರಸಾದ ಸ್ವೀಕರಿಸಬಹುದಾಗಿದೆ.
ಮಧ್ಯಾಹ್ನ 12.30ರಿಂದ ಮಧ್ಯಾಹ್ನ 2.30ರವರೆಗೆ ಪ್ರಸಾದ ವಿತರಣೆ ನಡೆಯುತ್ತಿದೆ. ಭಕ್ತರಿಗೆ ಪೂರಿ, ತರಕಾರಿ ಪಲ್ಯ, ಹಲ್ವಾ, ದಾಲ್, ಅನ್ನವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ. ಇದರಲ್ಲಿ ಏನಾದರೂ ಬದಲಾವಣೆಯಾಗುವ ಸಾಧ್ಯತೆ ಇದೆ. ಚೈತ್ರ ಹುಣ್ಣಿಮೆಯವರೆಗೆ ಮಾಡಿರುವ ಈ ಸೀತಾ ರಸೋಯಿಯನ್ನು ನಂತರವೂ ಮುಂದುವರಿಸಬಹುದು ಎಂದು ಟ್ರಸ್ಟ್ ನಿರ್ಧರಿಸಿದೆ.