ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಹಬ್ಬ ಹರಿದಿನ ಹತ್ತಿರ ಬಂತೆಂದರೆ ಹೂವು, ಹಣ್ಣು ಮಾರಾಟಗಾರರಿಗೆ ಸುಗ್ಗಿ. ಇದೀಗ ನವರಾತ್ರಿ ಸಂಭ್ರಮಕ್ಕೆ ಹೂವು ಕೊಳ್ಳುವವರು ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ. ಹೂವು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಇಂದು ಆಯುಧಪೂಜೆ ಸಡಗರ ಎಲ್ಲೆಡೆ ಇದೆ, ನಾಳೆ ವಿಜಯದಶಮಿ ಸಂಭ್ರಮಕ್ಕೆ ಅಗತ್ಯ ಸಾಮಾನುಗಳ ಖರೀದಿಗೆ ಬೆಂಗಳೂರಿನ ಜನ ಕೆ.ಆರ್. ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.
ಬೆಂಗಳೂರಿನ ಕೆ.ಆರ್ . ಮಾರುಕಟ್ಟೆ ಅಷ್ಟೇ ಅಲ್ಲ, ರಾಜ್ಯದ ವಿವಿಧ ಜಿಲ್ಲೆಗಳ ಮಾರಯಕಟ್ಟೆಯಲ್ಲಿಯೂ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ. ಕೆಜಿಗಟ್ಟಲೆ ಹೂವು ಕೊಳ್ಳಲು ಬಂದವರು, ಗ್ರಾಂಗಟ್ಟಲೆ ತೆಗೆದುಕೊಂಡು ಮರಳುತ್ತಿದ್ದಾರೆ. ನವರಾತ್ರಿ ಹಬ್ಬದ ಸಂಭ್ರಮದ ಸಮಯದಲ್ಲಿ ಪ್ರತಿ ವರ್ಷವೂ ಹೂವುಗಳಿಗೆ ಬೇಡಿಕೆ ಇದ್ದದ್ದೇ, ಹಾಗಾಗಿ ಹೂವುಗಳ ದರವೂ ಹೆಚ್ಚಾಗುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಹೂವುಗಳನ್ನು ನಾಲ್ಕು ದಿನ ಮುಂಚಿತವಾಗಿಯೇ ಖರೀದಿ ಮಾಡಿ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ, ಅವು ಫ್ರೆಶ್ ಎನಿಸುವುದಿಲ್ಲ. ಈ ರೀತಿ ಪೂಜೆ ಮಾಡಿದರೂ ಸಮಾಧಾನ ಎನಿಸುವುದಿಲ್ಲ, ಹಣ ಹೆಚ್ಚಿದೆ ಆದರೆ ಹಬ್ಬ ಮಾಡಲೇಬೇಕು, ನಮ್ಮ ಹಣಕ್ಕೆ ತಕ್ಕಷ್ಟು ಹೂವು, ಹಣ್ಣುಗಳನ್ನು ಕೊಳ್ಳುತ್ತೇವೆ ಎಂದು ಗ್ರಾಹಕರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಒಂದು ಕೆ.ಜಿ. ಮಲ್ಲಿಗೆ ಹೂವಿನ ದರ ಒಂದು ಸಾವಿರ ರೂಪಾಯಿ ಇದೆ, ಹಾಗೂ ಕನಕಾಂಬರ ಮೂರು ಸಾವಿರ , ಗುಲಾಬಿ 400 ಮತ್ತು ಸೇವಂತಿಗೆ 400 ರೂಗಳಿವೆ.