ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಸಂತೋತ್ಸವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶೇಕಡಾ ೧೦೦ ಅಂಕವನ್ನು ಪಡೆದು ಉದ್ಯೋಗಕ್ಕಾಗಿ ಸಂದರ್ಶನದಲ್ಲಿ ಕುಳಿತರೆ ವಿದ್ಯಾಭ್ಯಾಸದ ಅರಿವಿನ ಕೊರತೆ ಅದೆಷ್ಟೋ ಮಂದಿಯಲ್ಲಿ ಕಂಡಿರುತ್ತೇನೆ. ಆದ್ದರಿಂದ ಪ್ರಮಾಣಪತ್ರವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಅಂಟಿಕೊಳ್ಳದೆ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಾ ಕೌಶಲ್ಯಾಭಿವೃದ್ಧಿಯತ್ತ ಗಮನವನ್ನು ಹರಿಸಿ ಎಂದು ಭಟ್ ಬಯೋಟೆಕ್ ಇಂಡಿಯಾ ಬೆಂಗಳೂರು ಇದರ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಡಾ. ಶಾಮಭಟ್ ನುಡಿದರು.
ಗುರುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಸಂತೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆಗಳಿರುತ್ತವೆ. ಆದರೆ ಉತ್ತಮ ಶಿಕ್ಷಣವನ್ನು ಪೂರೈಸಲು ಆರ್ಥಿಕತೆಯ ಕೊರತೆ, ಪೋಷಕರ ಸಹಕಾರ, ಶಿಕ್ಷಣ ಸಂಸ್ಥೆಗಳು ಸನಿಹದಲ್ಲಿರದಿರುವುದು ಎಂಬಿತ್ಯಾದಿ ಕಾರಣಗಳಿಂದಾಗಿ ವಂಚಿತರಾಗುತ್ತಾರೆ. ಸ್ಪಷ್ಟ ಗುರಿಯೊಂದಿಗೆ ಎಲ್ಲವನ್ನೂ ಸರಿದೂಗಿಸಿ ಉನ್ನತ ವ್ಯಾಸಂಗದಲ್ಲಿ ಸಾಧನೆಯನ್ನು ಮಾಡಿ ಹಲವಾರು ಜನರಿಗೆ ಉದ್ಯೋಗದಾತನಾಗಿ ಮಣ್ಣಿನ ಋಣವನ್ನು ತೀರಿಸಿದ ಅದೆಷ್ಟೊ ಮಂದಿ ನಮ್ಮೊಂದಿಗಿದ್ದಾರೆ. ಹೊಸನಗರ ಶ್ರೀರಾಮಚಂದ್ರಾಪುರ ಮಠದ ಸಂಯೋಜನಾ ಖಂಡದ ಸಂಯೋಜಕ ಡಾ. ವೈ.ವಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ವಿಪ್ರೋ ಲಿ.ಬೆಂಗಳೂರು ಇದರ ಆಡಳಿತ ಸಲಹಾಗಾರ ಶಿವರಂಜನ್ ಬೇರ್ಕಡವು ಮಾತನಾಡುತ್ತಾ ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರವನ್ನು ಗುರುತಿಸಿ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹವನ್ನು ನೀಡಬೇಕೇ ವಿನಹ ನಮ್ಮ ಆಶೋತ್ತರಗಳನ್ನು ಅವರ ತಲೆಯ ಮೇಲೆ ಹೇರಬಾರದು. ಹಾಗಾದಾಗ ವಿದ್ಯಾರ್ಥಿಯು ಉತ್ತಮ ವ್ಯಾಸಂಗವನ್ನು ಪೂರೈಸಬಲ್ಲ. ಶಿಕ್ಷಣ ಸಂಸ್ಥೆಗಳು ಉತ್ತಮ ಫಲಿತಾಂಶದ ಹಂಬಲದೊಂದಿಗಿನ ಚಟುವಟಿಕೆಗಳನ್ನು ಹೊರತುಪಡಿಸಿ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗುವಂತಹ ಇತರೇ ಸಾಂಸ್ಕೃತಿಕ, ಸಾಹಿತ್ತಿಕ, ಕ್ರೀಡೆ ಮೊದಲಾದ ಚಟುವಟಿಕೆಗಳನ್ನು ಇಲ್ಲಿ ಹಮ್ಮಿಕೊಂಡು ಬಂದಿರುವುದು ಪೋಷಕರ ಸೌಭಾಗ್ಯ ಎಂದರು. ಇಂತಹ ಶಾಲೆಗಳನ್ನು ಗುರುತಿಸಿ ಸಮಾಜದ ಎಲ್ಲರೂ ಕೈಲಾದ ವಿಧಾನದಲ್ಲಿ ಅಭಿವೃದ್ಧಿಗೊಳಿಸಬೇಕು. ಇದರಿಂದ ಮುಂದಿನ ಪೀಳಿಗೆಯ ಬದುಕು ಹಸನಾಗಬಹುದು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ., ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ, ಮಾತೃಸಮಿತಿ ಅಧ್ಯಕ್ಷೆ ರೇಶ್ಮಾ ಕನಕಪ್ಪಾಡಿ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಶೈಕ್ಷಣಿಕ ವರ್ಷದ ಸಾಧನೆಯ ಬೆಳಕನ್ನು ಚೆಲ್ಲಿದರು. ಶಾಲಾ ನಾಯಕ ಅಭಯ ಶರ್ಮ ಪಂಜಿತ್ತಡ್ಕ ಸ್ವಾಗತಿಸಿ, ಉಪನಾಯಕಿ ಮಾನಸಾ ಚುಳ್ಳಿಕ್ಕಾನ ವಂದಿಸಿದರು.
೨೦೨೧-೨೨ನೇ ವರ್ಷದ ಪ್ರತೀ ತರಗತಿಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಗ್ರೇಸರ ಹಾಗೂ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯದಲ್ಲಿಯೂ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ನಿವೃತ್ತ ಅಧ್ಯಾಪಕ ಕುಳಮರ್ವ ಶ್ಯಾಮ ಭಟ್ ನೀಡುವ ದತ್ತಿನಿಧಿ ನೀಡಲಾಯಿತು. ಬೇರ್ಕಡವು ಸೀತಾರಾಮ ಭಟ್ಟರ ಸ್ಮರಣಾರ್ಥ ಮೊಮ್ಮಗ ಶಿವರಂಜನ್ ಬೇರ್ಕಡವು ಕೊಡಮಾಡುವ ಸ್ವರ್ಣಾಂಕುರ ಪ್ರಶಸ್ತಿಯನ್ನು ಅತ್ಯುತ್ತಮ ವಿದ್ಯಾರ್ಥಿ ಎಂದು ಗುರುತಿಸಲ್ಪಟ್ಟ ಬಿ. ಶ್ರದ್ಧಾ ಬಳ್ಳಂಬೆಟ್ಟು ಪಡೆದುಕೊಂಡಳು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಿರಂತರ ಆರು ಗಂಟೆಗಳ ಸಾಂಸ್ಕೃತಿಕ ಮನೋರಂಜನೆಯನ್ನು ಸಭಾಸದರಿಗೆ ಉಣಬಡಿಸಿದರು. ಯಾವುದೇ ಧ್ವನಿಸುರುಳಿಯನ್ನು ಬಳಸದೆ ವಿದ್ಯಾರ್ಥಿಗಳೇ ಎಲ್ಲಾ ಕಾರ್ಯಕ್ರಮಗಳನ್ನು ನಿರ್ವಹಿಸಿರುವುದು ಮೆಚ್ಚುಗೆಗೆ ಪಾತ್ರವಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಕೋಶಾಧಿಕಾರಿ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!