ಹೊಸದಿಗಂತ ವರದಿ ಬಾಗಲಕೋಟೆ:
ರಾಜಸ್ಥಾನದ ಉದಯಪುರದಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಶಿರಚ್ಛೇದನಕ್ಕೊಳಗಾದ ಹಿಂದೂ ವ್ಯಕ್ತಿ ಕನ್ಹಯ್ಯಲಾಲ್ ಹತ್ಯೆಯನ್ನು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲರು ತೀವ್ರವಾಗಿ ಖಂಡಿಸಿದ್ದಾರೆ. ಹಗಲಿನಲ್ಲೇ ಕನ್ಹಯ್ಯ ಅವರನ್ನು ಕೊಲೆ ಮಾಡಿದ್ದಲ್ಲದೇ ನಂತರ ಹತ್ಯೆಯ ಕುರಿತು ವಿಡಿಯೋ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಈ ಕೊಲೆ ಮಾಡಿರುವ ಆರೋಪಿಗಳಿಗೆ ಕಾನೂನಿನ ಪ್ರಕಾರ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ದೇಶದ ಸರ್ವ ಜನರ ಒಳಿತಿಗಾಗಿ ಹಾಗೂ ದೇಶದ ಅಭಿವೃದ್ಧಿಗೋಸ್ಕರ ಹಗಲಿರಳು ಹಾಗೂ ವಿಶ್ವವೇ ಮೆಚ್ಚುವಂತಹ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಕೂಡ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುವಂತಹ ವಿಡಿಯೋ ಮಾಡಿರುವ ಧರ್ಮಾಂಧರಿಗೆ ಕಠಿಣ ಶಿಕ್ಷೆಯಾಗುವ ಮೂಲಕ ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಾಗಿದೆ ಎಂದರು.
ಕನ್ನಯ್ಯನನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಮೂಲಕ ವಿಕೃತಿ ಮೆರೆಯುವವರಿಗೆ ಪಾಠವಾಗಬೇಕು. ಕೊಲೆ ಮಾಡಿರುವ ಆರೋಪಿಗಳಿಗೆ ಭಯೋತ್ಪಾದಕರ ನಂಟು ಇದೆ ಎಂಬ ಮಾಹಿತಿ ಹರಿದಾಡುತ್ತಿದ್ದು ಕೂಡಲೇ ಸರ್ಕಾರ ಆತನ ಸಂಪರ್ಕದಲ್ಲಿರುವವರನ್ನು ಬಂಧಿಸಿ ಅವರಿಗೂ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.