ಬಜರಂಗದಳ ದೇಶಭಕ್ತ ಸಂಘಟನೆ: ಅಪ್ಪಚ್ಚುರಂಜನ್

ಹೊಸದಿಗಂತ ವರದಿ, ಮಡಿಕೇರಿ:

ಬಜರಂಗದಳವನ್ನು ನಿಷೇಧಿಸಲು ಅದು ಅಲ್-ಖೈದಾದದಂತಹ ಭಯೋತ್ಪಾದನಾ ಸಂಘಟನೆಯಲ್ಲ. ಬದಲಾಗಿ ಅದೊಂದು ದೇಶಭಕ್ತ ಸಂಘಟನೆ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಅಧಿಕಾರಕ್ಕೆ ಬಂದ ಮೇಲೆ ಭಜರಂಗ ದಳವನ್ನು ನಿಷೇಧ ಮಾಡುವುದಾಗಿ ಹೇಳಿದ್ದಾರೆ, ಅವರು ಅವಸಾನ ಹೊಂದುವುದು ಖಚಿತ ಎಂದು ಮಡಿಕೇರಿ ಕ್ಷೇತ್ರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಕುಶಾಲನಗರ ಸಮೀಪದ ಶಿರಂಗಾಲದಲ್ಲಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ‌ ಅವರು, ಬಜರಂಗದಳ ದೇಶಾಭಿಮಾನವನ್ನು ಪಸರಿಸುತ್ತಿರುವ ದೇಶಭಕ್ತರ ಸಂಘಟನೆ. ಅದು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಇಂತಹ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂದಿರುವ ಸಿದ್ಧರಾಮಯ್ಯ ಈ ಬಾರಿ ವರುಣದಲ್ಲಿ ಸೋಲುವುದು ಖಚಿತ. ಜೊತೆಗೆ ಕಾಂಗ್ರೆಸ್ 40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.
ಇಂಗ್ಲೆಂಡ್’ನಿಂದ ಟಿಪ್ಪು ಖಡ್ಗ ತಂದ ವಿಜಯ್ ಮಲ್ಯ, ಟಿಪ್ಪು ಧಾರಾವಾಹಿ ಮಾಡಿದ ಸಂಜಯ್ ಖಾನ್ ಮಣ್ಣು ಮುಕ್ಕಿದರು, ಇದೀಗ ಅದು ಟಿಪ್ಪು ಜಯಂತಿ ಮತ್ತೆ ಮಾಡುತ್ತೇವೆ ಎನ್ನುತ್ತಿರುವ ಸಿದ್ಧರಾಮಯ್ಯನವರ ಸರದಿ ಎಂದ ಅಪ್ಪಚ್ಚು ರಂಜನ್, ಬಿಜೆಪಿ ಈ ಬಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದರು.
ಸಿದ್ಧಲಿಂಗಪುರ, ಅಳುವಾರ, ಹಳೆಕೋಟೆ, ಹೆಬ್ಬಾಲೆ, ಹುಲಸೆ, ಕಣಿವೆಗಳಲ್ಲಿ ಅಪ್ಪಚ್ಚು ರಂಜನ್ ಬುಧವಾರ ಬಿರುಸಿನ ಪ್ರಚಾರ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!