ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಚೆಮ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರುಂಬಳ ಬೇನೂರು ನಿವಾಸಿ, ಪದವಿ ವಿದ್ಯಾರ್ಥಿನಿಯಾಗಿದ್ದ ಅಂಜುಶ್ರೀ ಪಾರ್ವತಿ (19) ಸಾವಿಗೆ ಆಹಾರವು ವಿಷಾಂಶಗೊಂಡಿರುವುದೇ ಕಾರಣವೆಂದು ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಶನಿವಾರ ಸಂಜೆ ಪ್ರಾಥಮಿಕ ವರದಿ ನೀಡಿದ್ದಾರೆ.
ವಿಷಾಂಶಯುಕ್ತ ಆಹಾರ ಸೇವಿಸಿ ವಿದ್ಯಾರ್ಥಿನಿಯ ಅಂಗಾಂಗ ವೈಫಲ್ಯಗೊಂಡು ಸಿಂಡ್ರೋಮ್ನೊಂದಿಗೆ ಸೆಪ್ಟಿಸೆಮಿಯಾದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಜಿಲ್ಲಾ ವೈದ್ಯಾಧಿಕಾರಿಯವರು ಕೇರಳ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಅಂಜುಶ್ರೀ ಪಾರ್ವತಿ ಅವರು ಡಿಸೆಂಬರ್ 31 ರಂದು ಮನೆಯಲ್ಲಿ ತಾಯಿ, ಸಹೋದರ ಮತ್ತು ಸೋದರ ಸಂಬಂ ಹುಡುಗಿಯೊಂದಿಗೆ ಕಾಸರಗೋಡು ಅಡ್ಕತ್ತಬೈಲು ಹೋಟೆಲ್ನಿಂದ ಆನ್ಲೈನ್ ಮೂಲಕ ಖರೀದಿಸಿದ ಮಾಂಸಾಹಾರವನ್ನು ಸೇವಿಸಿದ್ದರು. ಬಳಿಕ ಆಕೆ ವಾಂತಿ ಮಾಡಿಕೊಂಡು ಸುಸ್ತಾದ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆ, ಕಾಸರಗೋಡಿನ ಆಸ್ಪತ್ರೆ ನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು. ಈ ವೇಳೆ ವಿದ್ಯಾರ್ಥಿನಿಗೆ ರಕ್ತ ಪರೀಕ್ಷೆ ನಡೆಸಿ ಐವಿ ಫ್ಲೂಯಿಡ್ ಆಂಟಿಬಯೋಟಿಕ್ ಸೇರಿದಂತೆ ಚಿಕಿತ್ಸೆ ನೀಡಲಾಗಿತ್ತು. ಜ.6ರಂದು ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು , ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ.7ರಂದು ಸಾವಿಗೀಡಾದರು ಎಂದು ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.